ಮುದ್ರಣ ಮಾಧ್ಯಮದಲ್ಲಿ ವಿದೇಶಿ ಬಂಡವಾಳವೇ.. ಶಿವ ಶಿವ ..
* ಕೆ.ಸದಾಶಿವ
ಮಂಗಳೂರು : ಮುದ್ರಣ ಮಾಧ್ಯಮದಲ್ಲಿ ಬಂಡವಾಳ ಹೂಡುವ ವಿಷಯದಲ್ಲಿ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ (ಎನ್ಡಿಎ) ಪತ್ರಿಕೆಗಳ ಅಭಿಪ್ರಾಯವನ್ನೇ ಪಡೆಯಲಿಲ್ಲ ಎಂದು ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಅರ್ಜುನ ದೇವ ವಿಷಾದಿಸಿದ್ದಾರೆ.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಸಮೂಹ ಸಂಪರ್ಕ ಮತ್ತು ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಏರ್ಪಡಿಸಿದ್ದ ‘ಮುದ್ರಣ ಮಾಧ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆ- ವಿಚಾರ ಮಂಥನ’ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅರ್ಜುನ ದೇವ ಮಾತನಾಡುತ್ತಿದ್ದರು. ಸೆ.14 ರ ಶನಿವಾರ ಮಂಗಳೂರಿನ ‘ಸಹೋದಯ’ದಲ್ಲಿ ಕಾರ್ಯಕ್ರಮ ನಡೆಯಿತು.
ಎನ್ಡಿಎ ಘಟಕ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಪತ್ರಿಕೋದ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇಂಥ ನಿರ್ಧಾರ ಸೂಕ್ತವಾದುದಲ್ಲ . ಸಂಸತ್ತಿನಲ್ಲಿ ಚರ್ಚಿಸದೆ ಮುದ್ರಣ ಮಾಧ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಖಾಸಗೀಕರಣ, ಉದಾರೀಕರಣದ ಸಂಕಷ್ಟ ಪರಿಸ್ಥಿತಿಯಲ್ಲಿ ಕೆಲವು ಪತ್ರಿಕೆಗಳು ವಿದೇಶಿ ಬಂಡವಾಳವನ್ನು ಬೆಂಬಲಿಸುತ್ತವೆ. ಆದರೆ ಭಾರತೀಯ ಪತ್ರಿಕಾ ರಂಗದ ಹಿತದೃಷ್ಟಿಯಿಂದ ವಿದೇಶಿ ಹೂಡಿಕೆ ಆಶಾದಾಯಕವಲ್ಲ ಎಂದು ಅರ್ಜುನದೇವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದರು.
ಭಾರತೀಯ ಪತ್ರಿಕೆಗಳಲ್ಲಿ ಬಂಡವಾಳ ಹೂಡುವ ವಿದೇಶಿ ಹೂಡಿಕೆದಾರರು ನಮ್ಮ ದೇಶದ ಜನಾಭಿಪ್ರಾಯ, ಕಾನೂನು ಹಾಗೂ ಇಲ್ಲಿನ ವಿಷಯಗಳಿಗೆ ಸಹಮತ ವ್ಯಕ್ತಪಡಿಸಲಾರರು. ಈ ಮಂದಿ ಹೂಡಿದ ಬಂಡವಾಳವನ್ನು ಆದಷ್ಟೂ ಬೇಗ ವಾಪಸ್ಸು ಪಡೆಯುವ ಹಾಗೂ ಲಾಭದ ಕುರಿತು ಮಾತ್ರ ಚಿಂತನೆ ನಡೆಸುವರು ಎಂದು ಅರ್ಜುನದೇವ ಆತಂಕ ವ್ಯಕ್ತಪಡಿಸಿದರು.
ಅರ್ಜುನದೇವ್
ಭಾಷಣದ
ಮುಖ್ಯಾಂಶಗಳು
:
- ವಿದೇಶಿ ಬಂಡವಾಳದ ಪ್ರಮಾಣ ಶೇ. 25 ಅಥವಾ ಶೇ.3 ಎಷ್ಟೇ ಇದ್ದರೂ ಅದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಸಾಧ್ಯವಿಲ್ಲ .
- ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆಯಾಗುವಂಥ ವರದಿಗಳು ಮತ್ತು ಮೂರನೇ ಪುಟದ ವರದಿಗಳು ಮೊದಲ ಪುಟದಲ್ಲೇ ಪ್ರಕಟವಾಗುವ ಪರಿಸ್ಥಿತಿ ಒದಗಬಹುದು. ಪತ್ರಕರ್ತ ಹಾಗೂ ಸಂಪಾದಕನ ಮಾತಿಗೆ ಕಿಮ್ಮತ್ತೇ ದೊರಕದಿರಬಹುದು.
- ಮುದ್ರಣ ಮಾಧ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆ ವಿಷಯದಲ್ಲಿ ಪತ್ರಕರ್ತನ ನಡುವೆಯೇ ಒಗ್ಗಟ್ಟಿಲ್ಲ .
- ಸ್ಯಾಟಲೈಟ್ ಟೆಲಿವಿಷನ್ ಮತ್ತು ಡಿಟಿಎಚ್ ವ್ಯವಸ್ಥೆಯಲ್ಲಿ ಅವಕಾಶವಿರುವ ವಿದೇಶಿ ಬಂಡವಾಳ ಹೂಡಿಕೆ ಪದ್ಧತಿಯನ್ನು ಮುದ್ರಣ ಮಾಧ್ಯಮ ವ್ಯವಸ್ಥೆಯಲ್ಲಿ ಅಳವಡಿಸುವುದು ಸರಿಯಾದ ಕ್ರಮವಲ್ಲ .
- ವಿದೇಶಿ ಬಂಡವಾಳದಿಂದ ಪತ್ರಿಕೆಯ ಗುಣಮಟ್ಟ ಹೆಚ್ಚುತ್ತದೆ ಎನ್ನುವ ವಾದಗಳೆಲ್ಲಾ ಸುಳ್ಳು. ಮಾಧ್ಯಮ ದೊರೆ ಮುರ್ಡಾಕ್ ಬಂಡವಾಳ ತೊಡಗಿಸಿದ ನಂತರ ಲಂಡನ್ ಟೈಂಸ್ ಪತ್ರಿಕೆ ಗುಣಮಟ್ಟ ಕುಸಿದುದನ್ನೇ ನೆನೆಯಬಹುದು.
ಮುಖಪುಟ / ಇವತ್ತು... ಈ ಹೊತ್ತು...