ಮಂಗಳೂರು ಇನ್ಫೋಸಿಸ್ ವಿಸ್ತರಣಾ ಯೋಜನೆ ಮತ್ತು ಸ್ಥಳ ವಿವಾದ
* ಕೆ.ಸದಾಶಿವ
ಮಂಗಳೂರು : ಕಡಲ ನಗರಿ ಮಂಗಳೂರಿನಲ್ಲಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ವಿಸ್ತರಣಾ ಯೋಜನೆಗೆ 300 ಕೋಟಿ ರುಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ನರೇಂದ್ರನ್ ಕುಡುವಟ್ಟಾತ್ತ್ ಹೇಳಿದರು.
ಭಾರತೀಯ ಸಾರ್ವಜನಿಕ ಸಂಪರ್ಕಗಳ ಸಂಘದ ಮಂಗಳೂರು-ಮಣಿಪಾಲ ಘಟಕ ಸೆ.14 ರ ಶನಿವಾರ ಸಂಜೆ ಇನ್ಫೋಸಿಸ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಜವಾಬ್ದಾರಿಯುತ ಪ್ರಜೆಯಾಗಿ ಕಾರ್ಪೊರೇಟ್ ಸಂಸ್ಥೆಗಳು’ ಎನ್ನುವ ವಿಷಯದ ಕುರಿತು ಕುಡುವಟ್ಟಾತ್ತ್ ಮಾತನಾಡುತ್ತಿದ್ದರು.
ಸಾಮಾಜಿಕ ಸೇವೆಯು ಕಾರ್ಪೊರೇಟ್ ಸಂಸ್ಥೆಗಳ ಧ್ಯೇಯವಾಗಿರಲು ಸಾಧ್ಯವಿಲ್ಲ . ಆದರೆ ಸಾರ್ವಜನಿಕ ಸೇವೆಗೆ ತಮ್ಮ ಕೊಡುಗೆಯನ್ನು ನೀಡಲು ಹಿಂದೇಟು ಹಾಕುವುದಿಲ್ಲ ಎಂದು ನರೇಂದ್ರನ್ ಅಭಿಪ್ರಾಯ ಪಟ್ಟರು.
ಷೇರುದಾರರೊಡನೆ ಸಾಧಿಸುವ ಸೌಹಾರ್ದ ಸಂಬಂಧ ಸಂಸ್ಥೆಯ ಏಳಿಗೆಗೆ ಸಹಕಾರಿಯಾಗುತ್ತದೆ. ವ್ಯವಹಾರದಲ್ಲಿ ಪಾರದರ್ಶಕತೆಯಿದ್ದಾಗ ಸಾರ್ವಜನಿಕರು, ಷೇರುದಾರರು ಹಾಗೂ ಉದ್ಯೋಗಿಗಳು ಸಂಸ್ಥೆಯ ಬಗ್ಗೆ ವಿಶ್ವಾಸ ತಾಳುತ್ತಾರೆ ಎನ್ನುವ ತತ್ವದಲ್ಲಿ ಇನ್ಫೋಸಿಸ್ ನಂಬಿಕೆ ಇಟ್ಟಿದೆ. ಸಂಸ್ಥೆಯ ಹಿತೈಷಿಗಳ ಹಾಗೂ ಹೂಡಿಕೆದಾರರ ತೃಪ್ತಿಯೇ ಸಂಸ್ಥೆಯ ಮೂಲ ಧ್ಯೇಯವಾಗಿರಬೇಕು ಎಂದು ನರೇಂದ್ರನ್ ಹೇಳಿದರು.
ಾರತದ ವ್ಯವಹಾರ ಕ್ಷೇತ್ರಕ್ಕೆ ಜಾಗತಿಕ ಮನ್ನಣೆಯಿಲ್ಲ . ಆದರೆ ಉದ್ಯಮಿ ವ್ಯಕ್ತಿಗಳಿಗೆ ಮನ್ನಣೆ ದೊರಕಿರುವ ವೈದೃಶ್ಯವನ್ನು ಬಣ್ಣಿಸಿದ ನರೇಂದ್ರನ್, ಸರಿಯಾದ ಸಮಯದಲ್ಲಿ ತೆರಿಗೆ ಪಾವತಿ ಹಾಗೂ ಕರ್ತವ್ಯಗಳನ್ನು ನಿಭಾಯಿಸುವ ಕುರಿತು ತಮ್ಮ ಸಂಸ್ಥೆ ನಂಬಿಕೆ ಹೊಂದಿದೆ ಎಂದರು.
ಸ್ಥಳ ವಿವಾದ : ಇನ್ಫೋಸಿಸ್ ವಿಸ್ತರಣಾ ಯೋಜನೆಗೆ ವಿಶಾಲವಾದ ಸ್ಥಳ ಅಗತ್ಯವಾಗಿದ್ದು , ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆರೆ, ಈ ವರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ನರೇಂದ್ರನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೂತನ ಕಟ್ಟಡ ಹಾಗೂ ಲೋಕೋಪಯೋಗಿ ಇಲಾಖೆಯ ವಸತಿಗೃಹಗಳಿರುವ ಜಾಗವನ್ನು ಇನ್ಫೋಸಿಸ್ ಬಯಸಿದೆ ಎನ್ನುವ ಊಹಾಪೋಹಗಳ ಕುರಿತು ತುಸು ಸಿಡಿಮಿಡಿಗೊಂಡ ನರೇಂದ್ರನ್- ಈ ಸ್ಥಳ ನಮಗೆ ಅನುಕೂಲವಾಗಿದೆ. ಆದರೆ, ಇಂಥದ್ದೇ ಜಾಗ ಬೇಕು ಎಂದು ಕೇಳಿಲ್ಲ . ಅದೇ ಜಾಗವನ್ನು ನೀಡಿದರೆ, ಇನ್ಫೋಸಿಸ್ ವತಿಯಿಂದ ಸಂಬಂಧಿಸಿದ ಕಚೇರಿಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ