ಕಾವೇರಿ ಕಾವು, ವೀರಪ್ಪನ್ ಪಿಡುಗು : ಪ್ರವಾಸೋದ್ಯಮ ಭಣಭಣ
ಬೆಂಗಳೂರು : ಕಾವೇರಿ ಕಾವು, ವೀರಪ್ಪನ್ ಕಾಟದಿಂದ ಕರ್ನಾಟಕ ಪ್ರವಾಸೋದ್ಯಮ ಕಣ್ ಕಣ್ ಬಿಡುವಂತಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಐ.ಎಂ.ವಿಠ್ಠಲ ಮೂರ್ತಿ ಹೇಳಿದ್ದಾರೆ.
ವಿಠ್ಠಲ ಮೂರ್ತಿ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ದಸರಾ ಹತ್ತಿರಾಗುತ್ತಿದೆ. ಅಷ್ಟು ಹೊತ್ತಿಗಾದರೂ ಕಾವೇರಿ ಹಾಗೂ ವೀರಪ್ಪನ್ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಪ್ರವಾಸೋದ್ಯಮಕ್ಕೆ ಇನ್ನೂ ದೊಡ್ಡ ಹೊಡೆತ ಬೀಳಲಿದೆ. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ನಾಗರಹೊಳೆ ಮತ್ತು ಮಡಿಕೇರಿಗೆ ಹೋಗುವ ಎಲ್ಲಾ ಟೂರಿಸ್ಟ್ ಬಸ್ಸುಗಳ ಸಂಚಾರವನ್ನು ಈಗ ನಿಲ್ಲಿಸಲಾಗಿದೆ. ಸಾಲದ್ದಕ್ಕೆ ಈ ಪ್ರದೇಶಗಳಲ್ಲಿ ಕಾದಿರಿಸಲಾಗಿದ್ದ ಹೊಟೇಲು ರೂಮುಗಳನ್ನು ಕ್ಯಾನ್ಸಲ್ ಮಾಡುವವರೂ ಹೆಚ್ಚಾಗಿದ್ದಾರೆ ಎಂದು ವಿಠ್ಠಲ ಮೂರ್ತಿ ಹೇಳಿದರು.
ಕಬಿನಿ ಮತ್ತು ಬಿಳಿಗಿರಿ ರಂಗನ ಬೆಟ್ಟದ ಹತ್ತಿರದ ರೆಸಾರ್ಟ್ಗಳಲ್ಲಿ ಮಾಡಿರುವ ಬುಕಿಂಗ್ಗಳನ್ನೂ ವೀರಪ್ಪನ್ ಭಯದಿಂದ ರದ್ದು ಮಾಡುತ್ತಿದ್ದಾರೆ. ಜಂಗಲ್ ಲಾಡ್ಜೆಸ್ ಅಂಡ್ ರೆಸಾರ್ಟ್ಸ್ ಲಿಮಿಟೆಡ್ (ಜೆಎಲ್ಆರ್) ಗೆ ಇದರಿಂದ ಸಾಕಷ್ಟು ಲುಕಸಾನು. ಕಳೆದ ವಾರ ಈ ಮಾರ್ಗದಲ್ಲಿ ಬಂದ ಪ್ರವಾಸಿಗರ ವಾಹನಗಳನ್ನು ಪ್ರತಿಭಟನಾಕಾರರು ತಡೆಗಟ್ಟಿ ಸಾಕಷ್ಟು ಕಾಟ ಕೊಟ್ಟಿದ್ದಾರೆ ಎಂದು ಜೆಎಲ್ಆರ್ನ ಕಾರ್ಯ ನಿರ್ವಾಹಕ ನಿರ್ದೇಶಕ ವಿನಯ್ ಲುಥ್ರ ತಿಳಿಸಿದರು.
ಸರ್ಕಾರ ರೈತರಲ್ಲಿ ಅರಿವು ಮೂಡಿಸಿ, ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳದಂತೆ ಎಚ್ಚರ ವಹಿಸುವುದು ಮುಖ್ಯ. ಇಲ್ಲವಾದರೆ ಪ್ರವಾಸೋದ್ಯಮ ಇಲಾಖೆಯ ಗಲ್ಲಾ ಭಣಭಣ ಗುಟ್ಟಲಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ವಿಠ್ಠಲಮೂರ್ತಿ ಮನವಿ ಮಾಡಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...