ಪ್ರತಿಭಟನೆ ಇನ್ನೂ ಇದೆ ; ಸದ್ಯದಲ್ಲೇ ಕರ್ನಾಟಕ ಬಂದ್ !
ಬೆಂಗಳೂರು: ತಮಿಳುನಾಡಿಗೆ 0.8 ಟಿಎಂಸಿ ನೀರು ಬಿಡುವುದನ್ನು ವಿರೋಧಿಸಿ ಸದ್ಯದಲ್ಲಿಯೇ ಕರ್ನಾಟಕ ಬಂದ್ ಹಮ್ಮಿಕೊಳ್ಳಲು ಕೃಷ್ಣಾ ಕಾವೇರಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಈ ಬಗ್ಗೆ ಅಂತಿಮ ಹಂತದ ರೂಪು ರೇಷೆಗಳಿನ್ನೂ ಸಿದ್ಧಗೊಂಡಿಲ್ಲ. ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ಪ್ರಭಾವಿ ಸಂಘಟನೆಗಳ ಮೂಲಕ ಸಮಾಲೋಚನೆ ನಡೆಸಿದ ನಂತರ ಕರ್ನಾಟಕ ಬಂದ್ನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಮಿತಿ ಸಂಚಾಲಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಜಿ.ನಾರಾಯಣ ಕುಮಾರ್ ಮತ್ತು ಜಾಣಗೆರೆ ವೆಂಕಟರಾಮಯ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರಾಜ್ಯ ಸರಕಾರ ಪ್ರಾಧಿಕಾರದ ತೀರ್ಮಾನದಂತೆ ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಇನ್ನು 15 ದಿನಗಳಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಹೋರಾಡುತ್ತಿರುವವರು ಸಹಸ್ರಾರು ಸಂಖ್ಯೆಯಲ್ಲಿ ಕೃಷ್ಣ ರಾಜ ಸಾಗರಕ್ಕೆ ತೆರಳಿ ಅಲ್ಲಿ ಕಾವೇರಿ ಸಮಾವೇಶ ನಡೆಸಲಾಗುವುದು ಎಂದು ಕ್ರಿಯಾ ಸಮಿತಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...