ಕರಾವಳಿಯ ಯಕ್ಷಗಾನ ರಂಗಸ್ಥಳದಲ್ಲಿ ಪ್ರಶಸ್ತಿಗಳ ಕಲರವ...
ಮಂಗಳೂರು: ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ ಯಕ್ಷಕಲಾ ವಿಶ್ವಸ್ಥ ಮಂಡಳಿ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಹರಿದಾಸ ಶೇಣಿ ಗೋಪಾಲ ಕೃಷ್ಣ ಭಟ್ಟರಿಗೆ ಕುಕ್ಕಿಲ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ, ಹಿಮ್ಮೇಳವಾದನ ನಿಪುಣ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಗೆ ಲಯಬ್ರಹ್ಮ ದಿವಾಣ ಭೀಮಭಟ್ಟ ಪ್ರಶಸ್ತಿ ಹಾಗೂ ಹಾಸ್ಯಗಾರ ಪೆರ್ವೋಡಿ ನಾರಾಯಣ ಭಟ್ಗೆ ಕರ್ಗಲ್ಲು ಸುಬ್ಬಣ್ಣ ಭಟ್ ಸ್ಮರಣಾರ್ಥ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 13ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಪ್ರಶಸ್ತಿಯು 5001 ರೂಪಾಯಿ ನಗದು ಹಾಗೂ ಫಲಕವನ್ನೊಳಗೊಂಡಿರುತ್ತದೆ.
ವೀರಾಂಜನೇಯ ಯಕ್ಷಗಾನ ಕಲಾ ಸಂಘಕ್ಕೆ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕಟೀಲು ಮೇಳದ ಅಶಕ್ತ ಕಲಾವಿದ ಗಿರೀಶ್ ರಾವ್ ಅವರನ್ನು ಪುರಸ್ಕರಿಸುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಲಾಗಿದೆ ಎಂದು ಎನ್. ಮಹಾಬಲೇಶ್ವರ ಭಟ್ ನಿಟಿಲೆ ಹೇಳಿದ್ದಾರೆ.
ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರನ್ನು ಜಾನಪದ ಪ್ರಕಾಶನ ನೀಡುವ ‘ಶಿವರಾಮ ಕಾರಂತದೀಪ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುವ ಜಾನಪದ ದೀಪಾರಾಧನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಸಿದ್ಧ ಪ್ರಸಂಗಕರ್ತರಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಯನ್ನು ಈ ಬಾರಿ ಅರ್ಥದಾರಿಗಳಾದ ಎಂ. ಆರ್. ಲಕ್ಷ್ಮೀನಾರಾಯಣ ಸಾಗರ ಮತ್ತು ಆರುವ ಕೊರಗಪ್ಪ ಶೆಟ್ಟಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಅಕ್ಟೋಬರ್ 12ರಂದು ಹೆಬ್ರಿಯ ಅನಂತಪದ್ಮನಾಭ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...