ವಿವಿಐಪಿಗಳ ಸ್ವಾಗತಕ್ಕೆ ಮಕ್ಕಳನ್ನು ಯಾಕೆ ಗೋಳುಹೊಯ್ದುಕೊಳ್ತೀರಿ: ಜಿಎಸ್ಸೆಸ್
ದಾವಣಗೆರೆ : ವಿವಿಐಪಿಗಳಿಗೆ ಸ್ವಾಗತ ಕೋರಲು ತಾಸು ಗಟ್ಟಲೆ ಮಕ್ಕಳನ್ನು ಸಾಲಲ್ಲಿ ನಿಲ್ಲಿಸಿ ಕಾಯಿಸುವುದು ಕೂಡ ಒಂದು ಬಗೆಯ ಶೋಷಣೆ ಎಂದು ಕವಿ ಜಿ.ಎಸ್.ಶಿವರುದ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಗಣೇಶನ ಹಬ್ಬದ ಹಿಂದಿನ ದಿನ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಕನ್ನಡ ಕುವರ ಹಾಗೂ ಕನ್ನಡ ಕುವರಿ ಪ್ರಶಸ್ತಿ ವಿತರಿಸಿದ ನಂತರ ಅವರು ಮಾತಾಡುತ್ತಿದ್ದರು. ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ಇಂಗ್ಲಿಷನ್ನು ಅಂತರರಾಷ್ಟ್ರೀಯ ಭಾಷೆಯಾಗಿ ಬಳಸುತ್ತಾರೆ ಎಂಬ ತಪ್ಪು ನಂಬಿಕೆ ಅನೇಕರಲ್ಲಿ ಇದೆ. ಆದರೆ ವಾಸ್ತವದಲ್ಲಿ ಆಯಾ ದೇಶಗಳಲ್ಲೂ ಮಾತೃಭಾಷೆಗೇ ಆಡಳಿತದಲ್ಲಿ ಪ್ರಾಧಾನ್ಯವಿದೆ. ಆದರೆ ನಮ್ಮ ದೇಶದಲ್ಲಿ ಇಂಗ್ಲಿಷ್ ವ್ಯಾಮೋಹ ಅತಿಯಾಗಿದೆ. ಇಂಗ್ಲಿಷ್ ಭಾಷೆ ಅಭಿವೃದ್ಧಿಗೆ ಅಗತ್ಯ ಅನ್ನುವುದೇನೋ ನಿಜ. ಹಾಗಂತ ಅದೇ ಪ್ರಮುಖ ವ್ಯಾಸಂಗ ಮಾಧ್ಯಮವಾಗಕೂಡದು ಎಂದು ಜಿಎಸ್ಎಸ್ ಸಲಹೆಯಿತ್ತರು.
ಪ್ರಶಸ್ತಿ ಸ್ವೀಕರಿಸಿದವರ ಪರವಾಗಿ ಮಾತಾಡಿದ ವಿದ್ಯಾರ್ಥಿನಿ ಬಿ.ಸಿ.ಆಶಾ, ‘ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಟಿವಿಯಲ್ಲಿ ಯಾವಾಗಲೂ ಇಂಗ್ಲಿಷಿನಲ್ಲೇ ಮಾತಾಡೋದಿಕ್ಕೆ ಬೇಸರವಾಗುತ್ತೆ. ಅವರು ಕನ್ನಡದಲ್ಲಿ ಯಾಕೆ ಮಾತಾಡೊಲ್ಲ...’ ಅಂದಾಗ, ಸಭೆಯಲ್ಲಿ ಕರತಾಡನ.
ಕನ್ನಡ ವಿಶ್ವವಿದ್ಯಾಲಯದ ಡೀನ್ ನಾವಡ, ಶಾಂತಿವನ ಟ್ರಸ್ಟ್ ನಿರ್ದೇಶಕ ರಾಘವೇಂದ್ರ ಪೈ, ಸಿದ್ಧಗಂಗಾ ಶಾಲೆಯ ಕಾರ್ಯದರ್ಶಿ ಶಿವಣ್ಣ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...