ಪುತ್ತೂರಲ್ಲಿ ವಿಠಲ ಶಾಸ್ತ್ರಿಗಳ ಸಂಸ್ಮರಣೆ, ‘ಬಣ್ಣದ ಬದುಕು’ ಅನಾವರಣ
*ಸದಾಶಿವ ಕೆ.
ಪುತ್ತೂರು: ಕುರಿಯ ವಿಠಲ ಶಾಸ್ತ್ರಿಯವರು ಇಡೀ ಯಕ್ಷಗಾನ ಕ್ಷೇತ್ರ ಯಾವತ್ತೂ ನೆನಪಿನಲ್ಲಿ ಇಡಬೇಕಾದ ವ್ಯಕ್ತಿ ಎಂದು ಯಕ್ಷಗಾನ ಕಲಾವಿದ ಶೇಣಿ ಗೋಪಾಲ ಕೃಷ್ಣ ಭಟ್ಟ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣೆ ಮತ್ತು ಪುಸ್ತಕ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಯಕ್ಷಗಾನ ಕಲೆ ಸೌಂದರ್ಯ, ಆನಂದ ಮತ್ತು ಶಿಕ್ಷಣವನ್ನು ನೀಡುತ್ತದೆ. ಆದ್ದರಿಂದ ಇದನ್ನು ಜೀವಂತ ಕಲೆ ಎನ್ನಬಹುದು ಎಂದ ರಂಗ ಸ್ಥಳದ ವಿವಿಧ ಪಾತ್ರಗಳ ಬಗ್ಗೆ ಯಕ್ಷಗಾನದ ಧ್ರುವತಾರೆ ಶೇಣಿ ಗೋಪಾಲ ಕೃಷ್ಣ ಭಟ್ಟ ವಿಠಲ ಶಾಸ್ತ್ರಿಗಳು ತಾವು ರಂಗಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಇತರ ಕಲಾವಿದರಿಗೂ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.
ದಿವಂಗತ ಶಾಸ್ತ್ರಿಗಳು ಸಮಯ ಪ್ರಜ್ಞೆಯಿಂದ ಕೂಡಿದ ಯಕ್ಷಗಾನ ಕಲಾವಿದರಾಗಿದ್ದರು. ರಂಗಸ್ಥಳದಲ್ಲಿ ಗಂಭೀರತೆ ಮತ್ತು ಕಲೆಯನ್ನು ಪ್ರತಿಬಿಂಬಿಸುವಲಿ ಯಶಸ್ವಿಯಾಗುತ್ತಿದ್ದರು. ದಿ. ಡಾ. ಶಿವರಾಮ ಕಾರಂತರು ಕೂಡ ಶಾಸ್ತ್ರಿಗಳ ಪಾತ್ರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಲಿಗ್ರಾಮದ ಕಡೆಗೆ ಹೋದಾಗ ಡಾ. ಕಾರಂತರ ಮನೆಯಲ್ಲಿ ತಾವು ಮತ್ತು ಶಾಸ್ತ್ರಿಗಳು ನಡೆಸಿದ ಹರಟೆಯನ್ನು ಶೇಣಿ ಗೋಪಾಲ ಕೃಷ್ಣ ಭಟ್ಟ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಪಾತ್ರಗಳ ಬಗ್ಗೆ ಕಲಾವಿದರು ಎಚ್ಚರಿಕೆಯಿಂದ ಇರಬೇಕು ಎಂಬ ಅಭಿಪ್ರಾಯ ಮಂಡಿಸಿದ ಶೇಣಿ, ಕೆಲವೊಮ್ಮೆ ಕಲಾವಿದರು ಪಾತ್ರ ವಹಿಸಿದೊಡನೆ ಮೈಮರೆತು ಸಂದರ್ಭವನ್ನು ಬಿಟ್ಟು ಅರ್ಥಗಾರಿಕೆಗೆ ತೊಡಗುವ ಅಭಾಸವನ್ನು ಪ್ರಸ್ತಾಪಿಸಿದರು. ಶಾಸ್ತ್ರಿಗಳ ಪಾತ್ರ ನಿರ್ವಹಣೆ ಯಕ್ಷಗಾನದ ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ವಿವರಣೆ ನೀಡಿ ಎಂತಹ ನಿರಕ್ಷರಕುಕ್ಷಿಗೂ ಕೂಡ ಯಕ್ಷಕಾನದ ಕಥೆ ಅರ್ಥವಾಗುವಂತೆ ವಿವರಿಸುತ್ತಿದ್ದರು ಎಂದು ಶೇಣಿ, ಶಾಸ್ತ್ರಿಗಳನ್ನು ಸ್ಮರಿಸಿದರು.
ಬಣ್ಣದ ಬದುಕು ಪುಸ್ತಕ ಬಿಡುಗಡೆ
ದಿವಂಗತ ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥೆ ‘ಬಣ್ಣದ ಬದುಕು’ಪುಸ್ತಕವನ್ನು ಡಾ. ಬಿ. ಎಂ. ಮರಕಿಣಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮರಕಿಣಿ ರಂಗಸ್ಥಳದ ಬದುಕಿನ ಕಥೆಯನ್ನು ತೆರೆದು ಇರಿಸಿದ ಒಂದು ಅತ್ಯಂತ ಉತ್ತಮ ಪುಸ್ತಕವಾಗಿದೆ ಎಂದರು.
ಪುಸ್ತಕವನ್ನು ಪತ್ರಕರ್ತ ದಿವಂಗತ ಪದ್ಯಾಣ ಗೋಪಾಲ ಕೃಷ್ಣ ನಿರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಕುರಿಯ ವೆಂಕಟರಮಣ ಭಟ್ಟ, ಗೋಪಾಲ ಕೃಷ್ಣ ಅವರ ಪತ್ನಿ ಸಾವಿತ್ರಿ ಉಪಸ್ಥಿತರಿದ್ದರು. ಪುತ್ತೂರು ಕರ್ನಾಟಕ ಸಂಘದ ಚಿನ್ನದ ವರ್ಷದ ನೆನಪಿಗೆ ನಡೆದ ಈ ಸಭೆಯ ನಂತರ ವಾಲಿವಧೆ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ ಭಾಗವತರಾಗಿ, ಮದ್ದಳೆ ವಾದಕರಾಗಿ ಪದ್ಯಾಣ ಶಂಕರನಾರಾಯಣ ಭಟ್ಟ ಮತ್ತು ಚೆಂಡೆ ವಾದಕರಾಗಿ ಅಡೂರು ಲಕ್ಷ್ಮೀನಾರಾಯಣ ರಾವ್ ಭಾಗವಹಿಸಿದ್ದರು. ಅರ್ಥದಾರಿಗಳಲ್ಲಿ , ರಾಮನಾಗಿ ಶೇಣಿ ಗೋಪಾಲ ಕೃಷ್ಣ ಭಟ್, ವಾಲಿಯಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಸುಗ್ರೀವನಾಗಿ ಕೆ. ಗೋವಿಂದ ಭಟ್ ಮತ್ತು ತಾರೆಯಾಗಿ ಮಧುಕರ ಮಲ್ಯ ಭಾಗವಹಿಸಿದ್ದರು.
ಮುಖಪುಟ / ಇವತ್ತು... ಈ ಹೊತ್ತು...