ಕಾವೇರಿ: ಮತ್ತೊಮ್ಮೆ ಕಬಿನಿ ಕ್ರೆಸ್ಟ್ಗೇಟ್ ಮುಚ್ಚಿಸಿದ ರೈತರು
ಎಚ್. ಡಿ. ಕೋಟೆ: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿರುವುದನ್ನು ವಿರೋಧಿಸುತ್ತಿರುವ ರೈತರು ಮತ್ತೊಮ್ಮೆ ಜಲಾಶಯ ಕಚೇರಿಯನ್ನು ವಶಪಡಿಸಿಕೊಂಡು ನೀರು ಹರಿಯುವಿಕೆಯನ್ನು ತಡೆಹಿಡಿದಿದ್ದಾರೆ.
ನಂಜನಗೂಡು ತಾಲ್ಲೂಕು ಮತ್ತು ಎಚ್. ಡಿ.ಕೋಟೆಯಿಂದ ಕಬಿನಿ ಜಲಾಶಯ ಪ್ರದೇಶಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ರೈತರು ತೆರಳಿ ಜಲಾಶಯ ಕಚೇರಿಗೆ ಮುತ್ತಿಗೆ ಹಾಕಿದರು. ಕಬಿನಿ ಜಲಾಶಯಕ್ಕೆ ಹಾರಿ ಕಂಠ ಮಟ್ಟ ನೀರಿನಲ್ಲಿ ನಿಂತು ತಮಿಳುನಾಡಿಗೆ ನೀರು ಬಿಡಬಾರದು ಎಂಬ ಘೋಷಣೆಯಾಂದಿಗೆ ಸರಕಾರದ ಕ್ರಮವನ್ನು ವಿರೋಧಿಸಿದರು. ಗುಂಪನ್ನು ತಡೆಯಲು ಲಾಠಿ ಪ್ರಹಾರ ಮಾಡಿದ ಪೊಲೀಸರತ್ತ ರೈತರು ಕಲ್ಲೆಸೆಯಲು ಆರಂಭಿಸಿದಾಗ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಅವರು ಗಾಯಗೊಂಡಿದ್ದಾರೆ.
ಭಾನುವಾರ ಮಧ್ಯಾಹ್ನದಿಂದ ಕಬಿನಿಯ ಏರಿ ಮೇಲೆ ಠಿಕಾಣಿ ಹೂಡಿದ್ದು, ಕ್ರೆಸ್ಟ್ ಗೇಟ್ ತೆರೆಯದಂತೆ ನೋಡಿಕೊಂಡಿದ್ದಾರೆ.
ಲಾಠಿ ಚಾರ್ಜು ಮುಂದುವರೆಸಿದಲ್ಲಿ ಮುಂದಿನ ಗಂಭೀರ ಪರಿಣಾಮವನ್ನು ಪೊಲೀಸರು ಎದುರಿಸಬೇಕಾಗುತ್ತದೆ ಎಂದು ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಲ್ಲೇಶ್, ಪ್ರಜಾ ಹಿತರಕ್ಷಣಾ ಸಮಿತಿಯ ಕುರಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಈ ನಡುವೆ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕೆಲ ರೈತರ ಗುಂಪು ಮೈಸೂರು ಆಕಾಶವಾಣಿಗೆ ಮುತ್ತಿಗೆ ಹಾಕಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಲು ಪ್ರಯತ್ನಿಸಿತು. ಮಹಾರಾಜ ಭವನದಲ್ಲಿ ಭಾಗವಹಿಸಿದ್ದ ಶಾಸಕರ ವಿರುದ್ಧ ಘೋಷಣೆ ಕೂಗಿ ಅವರ ರಾಜೀನಾಮೆಗೆ ಒತ್ತಾಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...