ದೆವ್ವ ಓಡಿಸುತ್ತೇವೆಂದು ಯದ್ವಾ ತದ್ವಾ ಥಳಿಸಿ ಮಹಿಳೆಯ ಕೊಂದರು
ಬೆಂಗಳೂರು : ಮಹಿಳೆಯಾಬ್ಬಳಿಗೆ ದೆವ್ವ ಮೆಟ್ಟಿಕೊಂಡಿದೆ ಎಂದು ನಂಬಿದ ಮಂದಿ, ದೆವ್ವ ಬಿಡಿಸಲೋಸುಗ ಆಕೆಯನ್ನು ಯದ್ವಾತದ್ವಾ ಚಚ್ಚಿ ಕೊಂದಿರುವ ಘಟನೆ ರಾಜ್ಯದ ಅತ್ಯಂತ ಸುಶಿಕ್ಷಿತರ ಜಿಲ್ಲೆಗಳಲ್ಲೊಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವರದಿಯಾಗಿದೆ.
ದೇವನಹಳ್ಳಿ ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ದಿಚಿಕ್ಕನಹಳ್ಳಿ ಗ್ರಾಮದ ಭಾಗ್ಯಮ್ಮ (45) ಎನ್ನುವ ಕೂಲಿ ಮಹಿಳೆಯ ದುರಂತದ ಕಥೆಯಿದು.
ಮಾನಸಿಕವಾಗಿ ಜರ್ಝರಿತವಾಗಿದ್ದ ಭಾಗ್ಯಮ್ಮಳಿಗೆ ದೆವ್ವ ಮೆಟ್ಟಿಕೊಂಡಿದೆ ಎಂದು ಆಕೆಯ ಸಂಬಂಧಿಕರು ನಂಬಿ ದೆವ್ವ ಬಿಡಿಸಲು ಮೂಢನಂಬಿಕೆಗೆ ಶರಣಾದದ್ದೇ ಆಕೆಯ ಜೀವಕ್ಕೆ ಎರವಾಯಿತು. ಸೆ.1 ರಂದು ಭಾಗ್ಯಮ್ಮಳ ಅಳಿಯಂದಿರಾದ ನಾರಾಯಣಪ್ಪ , ವಿಜಯಕುಮಾರ್ ಮತ್ತು ಜಯರಾಂ ಎನ್ನುವವರು ದೊಣ್ಣೆ ಹಾಗೂ ಚಪ್ಪಲಿಗಳಿಂದ ಆಕೆಯನ್ನು ಥಳಿಸಿದರು. ದೆವ್ವದ ಕಥೆಯೇನಾಯಿತೋ, ಹಲ್ಲೆಯಿಂದ ಭಾಗ್ಯಮ್ಮ ತೀವ್ರವಾಗಿ ಗಾಯಗೊಂಡಳು. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶನಿವಾರ (ಸೆ.7) ಆಕೆ ಸಾವನ್ನಪ್ಪಿದಳು.
ಭಾಗ್ಯಮ್ಮಳ ಸಾವಿಗೆ ಕಾರಣರಾದ ಆರೋಪಿಗಳು ತಲೆ ತಪ್ಪಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...