ಜೈಲಿಂದಲೇ ವೀರಪ್ಪನ್ಗೆ ನೆಡುಮಾರನ್-ಮಣಿ ರೇಡಿಯಾ ಸಂದೇಶ?
ಬೆಂಗಳೂರು: ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆಗಾಗಿ ಪೋಟಾದಡಿ ಬಂಧಿತರಾಗಿರುವ ಪಿ. ನೆಡುಮಾರನ್ ಹಾಗೂ, ವೀರಪ್ಪನ್ಗೆ ನೆರವಾಗುತ್ತಿರುವ ಆರೋಪದ ಮೇಲೆ ಬಂಧಿತರಾಗಿರುವ ಕೊಳತ್ತೂರು ಮಣಿ ಅವರನ್ನು ಸಂಧಾನಕ್ಕೆ ಕಳುಹಿಸಿಕೊಡಬೇಕು ಎಂಬ ವೀರಪ್ಪನ್ ಬೇಡಿಕೆಯನ್ನು ಸರಕಾರ ನಿರಾಕರಿಸಿದೆ. ಆದರೆ ನೆಡುಮಾರನ್ ಅಥವಾ ಮಣಿ ಆಕಾಶವಾಣಿ ಮೂಲಕ ವೀರಪ್ಪನ್ಗೆ ಸಂದೇಶ ನೀಡುವ ಬಗ್ಗೆ ಸರಕಾರ ಚಿಂತಿಸುತ್ತಿರುವುದು ತಿಳಿದು ಬಂದಿದೆ.
ತಮಿಳುನಾಡು ಮತ್ತು ಕರ್ನಾಟಕದ ಆಕಾಶವಾಣಿ ಕೇಂದ್ರಗಳಿಂದ ನೆಡುಮಾರನ್ ಹಾಗೂ ಮಣಿಯವರ ಮಾತುಗಳನ್ನು ಬಿತ್ತರಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಆದರೆ ಕೊಳತ್ತೂರು ಮಣಿ ಬಳ್ಳಾರಿ ಜೈಲಿನಲ್ಲಿದ್ದರೆ ನೆಡುಮಾರನ್ ತಮಿಳುನಾಡು ಜೈಲಿನಲ್ಲಿದ್ದಾರೆ. ಇಬ್ಬರೂ ರಾಜ್ಕುಮಾರ್ ಬಿಡುಗಡೆಯ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇಬ್ಬರನ್ನೂ ಜಾಮೀನು ರಹಿತ ವಾರಂಟ್ನ ಮೇಲೆ ಬಂಧಿಸಲಾಗಿದೆ.
ಬಲ್ಲ ಮೂಲಗಳ ಪ್ರಕಾರ ಶನಿವಾರ ರಾಜ್ಯ ಭದ್ರತಾ ಸಲಹೆಗಾರ ಟಿ. ಶ್ರೀನಿವಾಸುಲು ಬಳ್ಳಾರಿಗೆ ಒಂದು ತಂಡವನ್ನು ಕಳುಹಿಸಿದ್ದು, ಕ್ಯಾಸೆಟ್ನಲ್ಲಿ ನಾಗಪ್ಪ ಬಿಡುಗಡೆಗೆ ಆಗ್ರಹಿಸಿ ಕೊಳತ್ತೂರು ಮಣಿಯ ಸಂದೇಶವನ್ನು ಮುದ್ರಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಇದೇ ಮಾದರಿಯಲ್ಲಿ ನೆಡುಮಾರನ್ ಅವರ ಸಂದೇಶವನ್ನು ಮುದ್ರಿಸಲು ಪ್ರಯತ್ನಗಳು ಸಾಗಿವೆ.
ಈ ಹಿಂದೆ ಅಂದರೆ ಸೆಪ್ಟೆಂಬರ್ 3ರಂದು ಕೊಳತ್ತೂರು ಮಣಿ ಈಗಾಗಲೇ ವೀರಪ್ಪನ್ಗೆ ಸಂದೇಶವನ್ನು ಆಕಾಶವಾಣಿ ಮೂಲಕ ಕಳುಹಿಸಿದ್ದರು. ಮಾನವೀಯತೆಯ ನೆಲೆಯಲ್ಲಿ ನಾಗಪ್ಪ ಅವರ ಅನಾರೋಗ್ಯವನ್ನು ಗಮನಿಸಿ ಬಿಡುಗಡೆ ಮಾಡಬೇಕು ಎಂದು ಮಣಿ ವೀರಪ್ಪನ್ನ್ನು ಕೋರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ