ಸೆ.7ಮಂಡ್ಯ ಬಂದ್ ; ಪದತ್ಯಾಗಕ್ಕೆ ಸಿದ್ಧರಿರಲು ಸಿಎಂಗೆ ರೈತರ ಸೂಚನೆ
ಮಂಡ್ಯ : ಸುಪ್ರಿಂಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದ ರೈತರು ಹಾಗೂ ವಿದ್ಯಾರ್ಥಿಗಳು ಸತತ ಎರಡನೇ ದಿನವೂ ತಮ್ಮ ಪ್ರತಿಭಟನೆ ಮುಂದುವರಿಸಿದರು.
ಬೆಂಗಳೂರು- ಮೈಸೂರು ರಸ್ತೆ ತಡೆ ಮಾಡಿ ಸಾರಿಗೆ ಸಂಪರ್ಕವನ್ನು ಸ್ಥಗಿತಗೊಳಿಸುವ ಮೂಲಕ ರೈತರು ಹಾಗೂ ವಿದ್ಯಾರ್ಥಿಗಳು ಗುರುವಾರ (ಸೆ.05) ಕಾವೇರಿ ನೀರು ಬಿಡುವುದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು. ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತ್ತು.
ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪವನ್ನು ಮತ್ತಷ್ಟು ಉಗ್ರಗೊಳಿಸಲಾಗುವುದು. ಸೆ.6 ರ ಶುಕ್ರವಾರ ಉಪವಾಸ ಸತ್ಯಾಗ್ರಹ, ಸೆ.7 ರ ಶನಿವಾರ ಮಂಡ್ಯ ಬಂದ್, ಸೆ.8 ರ ಭಾನುವಾರ ರೈಲು ಸಂಚಾರಕ್ಕೆ ಅಡ್ಡಿಗೊಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದು ಮಾಜಿ ಸಂಸದ ಹಾಗೂ ಮಂಡ್ಯ ಜಿಲ್ಲಾ ರೈತರ ಹಿತಾಸಕ್ತಿ ಸಮಿತಿ ಅಧ್ಯಕ್ಷರಾದ ಜಿ.ಮಾದೇಗೌಡ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲೆಯ ರೈತರು ಭೀಕರ ಕ್ಷಾಮ ಅನುಭವಿಸುತ್ತಿರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ರೈತರ ಹಿತಾಸಕ್ತಿ ಸಮಿತಿಯು ಕೆಆರ್ಎಸ್ಗೆ ಮುತ್ತಿಗೆ ಹಾಕಿ ಕ್ರೆಸ್ಟ್ ಗೇಟುಗಳ ಕೀಲಿ ಕೈಗಳನ್ನು ವಶಪಡಿಸಿಕೊಳ್ಳುವುದು ಎಂದು ಮಾದೇಗೌಡ ಎಚ್ಚರಿಸಿದರು.
ಜಿಲ್ಲೆಯ ಶಾಸಕರು ಪ್ರತಿಭಟನೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಇಲ್ಲದಿದ್ದರೆ ಅವರನ್ನು ಘರಾವ್ ಮಾಡಲಾಗುವುದು. ಸಂದರ್ಭ ಬಿದ್ದರೆ ಮುಖ್ಯಮಂತ್ರಿ ಕೃಷ್ಣ ತಮ್ಮ ಕುರ್ಚಿ ತ್ಯಜಿಸಲೂ ಸಿದ್ಧರಿರಬೇಕು ಎಂದು ಸಮಿತಿ ನಿರ್ಣಯ ಕೈಗೊಂಡಿರುವುದಾಗಿ ಮಾದೇಗೌಡ ತಿಳಿಸಿದರು.
(ಪಿಟಿಐ)
ಮುಖಪುಟ / ಕೃಷ್ಣ ಗಾರುಡಿ