ಹುಬ್ಬಳ್ಳಿಯ ಮಾಧವ ಟೆಕ್ಸ್ಟೈಲ್ ನೌಕರರಿಂದ ಆತ್ಮಾಹುತಿ ಬೆದರಿಕೆ
ಹುಬ್ಬಳ್ಳಿ: ನಗರದಲ್ಲಿರುವ ಮಾಧವ ಟೆಕ್ಸ್ಟೈಲ್ ಮಿಲ್ನ್ನು ಮುಚ್ಚಲಾಗಿದೆ. ಆದರೆ ಮಿಲ್ನಲ್ಲಿ ಕೆಲಸ ಕಳೆದುಕೊಂಡ ನೌಕರರಿಗೆ ನೆರವು ನೀಡುವುದಾಗಿ ಸರಕಾರ ನೀಡಿದ್ದ ಭರವಸೆ ನೆರವೇರಿಲ್ಲ. ಈ ಹಿನ್ನೆಲೆಯಲ್ಲಿ ಮಿಲ್ನ ನೌಕರರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಮಿಲ್ನ ಸಮೀಪದ ಗಿರಾನಿ ಚಾವ್ಲ್ ಪ್ರದೇಶದ ನಿವಾಸಿಗಳು ಹಲವಾರು ವರ್ಷದಿಂದ ಈ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ ಮಿಲ್ನ್ನು ಮುಚ್ಚಿರುವುದರಿಂದ ಗಿರಾನಿ ಚಾವ್ಲ್ನ ನಿವಾಸಿಗಳನ್ನು ವಲಸೆ ಹೋಗುವಂತೆ ಸರಕಾರ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಾನಿ ಚಾವ್ಲ್ ಹಾಗೂ ಮಿಲ್ನ ಕಾರ್ಮಿಕ ಸುರಕ್ಷಾ ಹೋರಾಟ ಸಮಿತಿಯು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಸರಕಾರವನ್ನು ಬೆದರಿಸಿದೆ.
ಸಮಿತಿಯ ನಾಯಕ ಹನುಮಂತಪ್ಪ ಮಾಪಲ್ಲಿ ಮತ್ತು ರಾಮಣ್ಣ ಗಂಗೂರ್ ಸರಕಾರ ಪರಿಹಾರದ ಹಣವನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಮಿಲ್ ಮುಚ್ಚಿರುವ ಮಾತ್ರಕ್ಕೆ ಗಿರಾನಿ ಚಾವ್ಲ್ನ ನಿವಾಸಿಗಳನ್ನು ಒಕ್ಕಲೇಳುವಂತೆ ಹೇಳುವ ಸರಕಾರವನ್ನು ನೌಕರರು ಖಂಡಿಸಿದ್ದಾರೆ. ಈ ಪ್ರದೇಶದಿಂದ ಒಕ್ಕಲೇಳದ ಹೊರತು ಪರಿಹಾರ ಹಣವನ್ನು ನೀಡಲಾಗುವುದಿಲ್ಲ ಎಂದು ಸರಕಾರ ಬೆದರಿಕೆ ಹಾಕುತ್ತಿದೆ. ಆದರೆ ಪರಿಹಾರ ನೀಡದ ಹೊರತು ನಾವು ಈ ಜಾಗ ಖಾಲಿ ಮಾಡುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜವುಳಿ ಖಾತೆ ಸಚಿವರು ಹಾಗೂ ವಿಭಾಗೀಯ ಆಯುಕ್ತರು ನೀಡಿರುವ ಭರವಸೆಗಳನ್ನು ನೆರವೇರಿಸಿಲ್ಲ. ಸರಕಾರದ ಈ ವಿಳಂಬ, ನೌಕರರಿಗೆ ವಿಪರೀತ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತಿದೆ.
ಪರಿಹಾರ ನೀಡದೇ ಇದ್ದಲ್ಲಿ ಆತ್ಮಾಹುತಿ ಮಾಡಿಕೊಳ್ಳುವುದಕ್ಕೂ ನೌಕರರು ಹಿಂಜರಿಯುವುದಿಲ್ಲ. ಆದ್ದರಿಂದ ಸರಕಾರ ಈಗಿಂದೀಗಲೇ ಎಚ್ಚೆತ್ತುಕೊಂಡು ನೌಕರರಿಗೆ ಪರಿಹಾರ ಬಿಡುಗಡೆ ಮಾಡಬೇಕು. ಅಲ್ಲದೆ ಗಿರಾನಿ ಚಾವ್ಲ್ ಪ್ರದೇಶವನ್ನು ತೆರವುಗೊಳಿಸಬೇಕು ಎಂಬ ಸರಕಾರದ ನಿರ್ಧಾರವನ್ನು ಹಿಂತೆದುಕೊಳ್ಳಬೇಕು ಎಂದು ಕಾರ್ಮಿಕ ನಾಯಕರು ಸರಕಾರವನ್ನು ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...