ಜಯಾ ವಿರುದ್ಧ ಚಂದ್ರೇಗೌಡರ ನ್ಯಾಯಾಲಯ ನಿಂದನೆ ಫಿರ್ಯಾದು
ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ನ್ಯಾಯಾಲಯ ನಿಂದನೆ ಅಹವಾಲು ಸಲ್ಲಿಸಲು ಸ್ವತಃ ವಕೀಲರೂ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ನಿರ್ಧರಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತಾಡುತ್ತಿದ್ದ ಚಂದ್ರೇಗೌಡ, ಸೋನಿಯಾ ಗಾಂಧಿ ಭಾರತೀಯ ಪ್ರಜೆ ಎಂದು ಈಗಾಗಲೇ ಸುಪ್ರಿಂಕೋರ್ಟ್ ತೀರ್ಪಿತ್ತಿದೆ. ಹೀಗಿದ್ದೂ, ಸೋನಿಯಾ ಗಾಂಧಿ ಕುರಿತು ಜಯಲಲಿತಾ ಕೊಟ್ಟಿರುವ ಹೇಳಿಕೆ ನ್ಯಾಯಾಲಯ ನಿಂದನೆಯಾಗುತ್ತದೆ ಎಂದು ಹೇಳಿದರು.
‘ನಾನು ಒಬ್ಬ ಸಚಿವನಾಗಿ ಅಹವಾಲು ಹೂಡಲು ನಿರ್ಧರಿಸಿಲ್ಲ , ವೈಯಕ್ತಿಕವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ತಮಿಳುನಾಡು- ಕರ್ನಾಟಕದ ಹಳಸಿ ಹೋಗುತ್ತಿರುವ ಸಂಬಂಧವನ್ನು ಸುಧಾರಿಸುವ ಬಗ್ಗೆ ಜಯಲಲಿತಾ ಚಿಂತಿಸಬೇಕು. ಅದು ಬಿಟ್ಟು ವೃಥಾ ಬೇಜವಾಬ್ದಾರಿಯುತ ಹೇಳಿಕೆಗಳು ಕೊಡುವುದು ಸರಿಯಲ್ಲ. ಕಾವೇರಿ ನದಿ ಹಂಚಿಕೆ ವಿಷಯದಲ್ಲೂ ಅವರು ತಮ್ಮ ನಿಲುವನ್ನು ಪ್ರಶ್ನಿಸಿಕೊಳ್ಳುವ ಗೊಡವೆಗೆ ಹೋಗುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆರಾಯನ ಮುನಿಸಿನ ಕಾರಣ ನದಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿಲ್ಲ. ಹೀಗಾಗಿ ಕಡಿಮೆ ನೀರಿನಲ್ಲಿ ಫಸಲು ಕೊಡುವಂಥಾ ಪರ್ಯಾಯ ಬೆಳೆ ತೆಗೆಯಲು ರೈತರಿಗೆ ಸೂಚಿಸಿದ್ದೇವೆ ಎಂದರು.
ವರನಟ ರಾಜ್ಕುಮಾರ್ ಬಿಡುಗಡೆಗಾಗಿ ವೀರಪ್ಪನ್ಗೆ 30 ಕೋಟಿ ರುಪಾಯಿ ಕಪ್ಪ ಒಪ್ಪಿಸಿರುವುದಾಗಿ ಜಯಲಲಿತಾ ಮಾಡಿರುವ ಆರೋಪ ದಿಟವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದು ಹುರುಳಿಲ್ಲದ್ದು ಎಂದು ಸಚಿವರು ಉತ್ತರ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...