ದ್ವೀಪವಾಗುತ್ತಿರುವ ಬಾಗಲಕೋಟೆ,ಆಲಮಟ್ಟಿ ಜಲ ಸಂಗ್ರಹ ಆರಂಭ
ಬಾಗಲಕೋಟೆ: ಆಲಮಟ್ಟಿ ಜಲಾಶಯದ ಎಲ್ಲ ಗೇಟುಗಳನ್ನೂ ಮುಚ್ಚಿ, ಜಲ ಸಂಗ್ರಹ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಾಗಲ ಕೋಟೆ ಮೂರು ಕಡೆಗಳಲ್ಲಿ ನೀರಿನಿಂದ ಸುತ್ತುವರೆದಿದೆ.
ಆಲಮಟ್ಟಿಯಲ್ಲಿ ನಿಗದಿತ 519.6 ಮೀಟರ್ ನೀರು ನಿಲ್ಲಿಸಲು ಸರಕಾರ ನಿರ್ಧರಿಸಿದೆ. ಇದರಿಂದ ಕಾರಿ ಹಳ್ಳದ ಎರಡೂ ಬದಿಯಲ್ಲಿ ನೀರು ನಿಂತಿದ್ದು ಬೆಳಗಾವಿ- ರಾಯಚೂರು ರಸ್ತೆ ಸಂಪರ್ಕ ಕಡಿದಿದೆ. ಈಗ ರಾಜ್ಯದ ಯಾವುದೇ ಭಾಗದಿಂದ ಬಾಗಲ ಕೋಟೆಯನ್ನು ಪ್ರವೇಶಿಸುವಂತಿಲ್ಲ. ಪುನರ್ವಸತಿ ಕೇಂದ್ರ ನವನಗರದ ಮೂಲಕ ಬಾಗಲಕೋಟೆ ಪಟ್ಟಣಕ್ಕೆ ಬರಬೇಕಾಗಿದೆ.
ಅಲ್ಲದೆ ಕಾರಿಹಳ್ಳ ಸೇವಾದಳ ಹಾಗೂ ಪಾರಖನಾಥ ದೇವಾಲಯದ ಬಳಿಯಲ್ಲಿ ನೀರು ನಿಂತು ಸಂಪರ್ಕ ಕಡಿದಿರುವುದರಿಂದ ಮುಚಖಂಡಿ ಕ್ರಾಸ್ ನಿವಾಸಿಗಳು ಅಕ್ಷರಶಃ ದ್ವೀಪದಲ್ಲಿ ವಾಸಿಸುವಂತಾಗಿದೆ. ಇನ್ನು ಎರಡು ವಾರಗಳಲ್ಲಿ ಆಲಮಟ್ಟಿ ಅಣೆಕಟ್ಟಿನಲ್ಲಿ 519. 6 ಮೀ ನೀರು ನಿಲ್ಲಲಿದೆ. ಈ ಹಿನ್ನೀರು ಸಂಗ್ರಹಣೆ ಡಿಸೆಂಬರ್ವರೆಗೂ ಮುಂದುವರೆಯಲಿದೆ ಎಂದು ಪುನರ್ವಸತಿ ಹಾಗೂ ಭೂಸ್ವಾಧೀನ ಕಮಿಶನರ್ ಎಸ್. ಎಂ. ಜಾಮದಾರ್ ತಿಳಿಸಿದ್ದಾರೆ.
ಬಾಗಲಕೋಟೆಯಿಂದ ಈವರೆಗೆ ಒಟ್ಟು 4700 ಕುಟುಂಬಗಳು ಸ್ಥಳಾಂತರಗೊಂಡಿವೆ. 521 ಮೀ. ಹಿನ್ನೀರು ವ್ಯಾಪ್ತಿಯ 450 ಕುಟುಂಬಗಳನ್ನು ಇನ್ನು ಸ್ಥಳಾಂತರಗೊಳಿಸಬೇಕಾಗಿದೆ. ಈಗ ನಿರ್ಮಿಸಲಾಗಿರುವ ನವ ನಗರದಲ್ಲಿ 1,500 ಶೆಡ್ಗಳು ನಿರ್ಮಾಣವಾಗಿವೆ. ಬೇರೆ ಸರಕಾರಿ ಕಟ್ಟಡಗಳಲ್ಲಿ ವಸತಿ ಕಲ್ಪಿಸಲಾಗಿದ್ದ 500 ಕುಟುಂಬಗಳನ್ನು ಶೆಡ್ಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಒಂದು ಸಾವಿರ ಶೆಡ್ಗಳು ಲಭ್ಯವಿವೆ ಎಂದು ಜಾಮದಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...