ಇದು ವೀರಪ್ಪನ್ ಶಿಕಾರಿಯ ಕೊನೇ ಅಧ್ಯಾಯ : ಅಡ್ವಾಣಿ
ಬೀದರ್/ಗುಲ್ಬರ್ಗಾ/ವಿಜಾಪುರ : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ವೀರಪ್ಪನ್ ವಿರುದ್ಧ ಈಗ ನಡೆಸಿರುವ ಕಾರ್ಯಾಚರಣೆ ಅಂತಿಮ ಅಧ್ಯಾಯ ಎಂದು ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರದ ಜನತೆಯ ಕಣ್ಣೆಲ್ಲಾ ಈಗ ಕರ್ನಾಟಕದ ಮೇಲೆ ನೆಟ್ಟಿದೆ. ವೀರಪ್ಪನ್ ಕಬಂಧಬಾಹುವಿನಲ್ಲಿರುವ ಮಾಜಿ ಸಚಿವರ ಬಿಡುಗಡೆಯದ್ದೇ ಸೊಲ್ಲು. ವೀರಪ್ಪನ್ ಅಟ್ಟ ಹಾಸವ ಮಟ್ಟ ಹಾಕಲು ಕೇಂದ್ರ ಕೂಡ ನೆರವು ಕೊಟ್ಟಿದೆ. ಇದು ನಿರ್ಣಾಯಕ ಘಟ್ಟ ಎಂದು ಸೋಮವಾರ ಅಡ್ವಾಣಿ ಸುದ್ದಿಗಾರರಿಗೆ ತಿಳಿಸಿದರು.
ದೇಶದ 2ನೇ ಅತಿದೊಡ್ಡ ಶಿವಾಜಿ ಪ್ರತಿಮೆ ಅನಾವರಣ ಛತ್ರಪತಿ ಶಿವಾಜಿಯ 14 ಅಡಿ ಎತ್ತರ ಹಾಗೂ 2.10 ಟನ್ ತೂಕದ ಪ್ರತಿಮೆಯನ್ನು ವಿಜಾಪುರದಲ್ಲಿ ಉಪ ಪ್ರಧಾನಿ ಅಡ್ವಾಣಿ ಅನಾವರಣಗೊಳಿಸಿದರು. ಮುಂಬಯಿಯ ಧನಂಜಯ ಸಾರಂಗ್ ಈ ಪ್ರತಿಮೆಯ ಶಿಲ್ಪಿ. ಈ ಪ್ರತಿಮೆ ಸ್ಥಾಪನೆಗಾಗಿ 30 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಕೆಸರು ಕಲ್ಲು ಹಾಕಿದ್ದರು.
ಶಿವಾಜಿಯ ‘ಅಷ್ಟ ಪ್ರಧಾನ’ ಆಡಳಿತ ಪದ್ಧತಿ ದೇಶಕ್ಕೇ ಮಾದರಿಯಾಗಬಲ್ಲಂಥದು. ಶಿವಾಜಿ ದೇಶಭಕ್ತನಷ್ಟೇ ಆಗಿರಲಿಲ್ಲ, ಆತ ಒಬ್ಬ ಪ್ರತಿಭಾವಂತ ಆಡಳಿತಗಾರನಾಗಿದ್ದ. ಚರಿತ್ರೆಯ ಪುಟಗಳು ಹೇಳುವಂತೆ ಶಿವಾಜಿ ತನ್ನ ಬಾಲ್ಯವನ್ನು ವಿಜಾಪುರದಲ್ಲಿ ಕಳೆದಿದ್ದ. ಆತನ ನೆನಪಿಗಾಗಿ ಈ ಪ್ರತಿಮೆಯನ್ನು ಕರ್ನಾಟಕ ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ಎಂದು ಅಡ್ವಾಣಿ ಶ್ಲಾಘಿಸಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ