ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಗೆಟ್ಟ ನಾಗಪ್ಪ ಆರೋಗ್ಯ ; ವೀರಪ್ಪನ್‌ನಿಂದ ವೈದ್ಯರ ಅಪಹರಣ ?

By Staff
|
Google Oneindia Kannada News

ಬೆಂಗಳೂರು : ಮಾಜಿ ಸಚಿವ ಹಾಗೂ ಸಂಯುಕ್ತ ಜನತಾದಳದ ನಾಯಕ ಎಚ್‌.ನಾಗಪ್ಪ ಅವರನ್ನು ವೀರಪ್ಪನ್‌ ಅಪಹರಿಸಿದ ಘಟನೆ 8 ನೇ ದಿನಕ್ಕೆ ಕಾಲಿಡುತ್ತಿರುವ ನಡುವೆಯೇ- ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಮೀಪದಿಂದ ‘ಸಿದ್ಧ’ ವೈದ್ಯರೊಬ್ಬರನ್ನು ನರಹಂತಕ ವೀರಪ್ಪನ್‌ ಅಪಹರಿಸಿದ್ದಾನೆನ್ನುವ ದಟ್ಟ ವದಂತಿಗಳು ಹಬ್ಬಿವೆ.

ಒತ್ತೆಯಾಳಾಗಿರುವ ನಾಗಪ್ಪನವರಿಗೆ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವೀರಪ್ಪನ್‌ ವೈದ್ಯರನ್ನು ಅಪಹರಿಸಿದ್ದಾನೆ ಎನ್ನುವ ಸುದ್ದಿಯನ್ನು ತಮಿಳು ವಾಹಿನಿ ಜಯಾ ಟೀವಿ ಪ್ರಕಟಿಸಿದೆ. ಆದರೆ, ಸಿದ್ಧ ವೈದ್ಯರೊಬ್ಬರನ್ನು ವೀರಪ್ಪನ್‌ ಅಪಹರಿಸಿರುವ ವದಂತಿಗಳನ್ನು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ವಿ.ವಿ.ಭಾಸ್ಕರ್‌ ಅಲ್ಲಗಳೆದಿದ್ದಾರೆ. ಗುಂಡಾಲ್‌ ಅರಣ್ಯ ಪ್ರದೇಶದಲ್ಲಿ ಎಸ್‌ಟಿಎಫ್‌ ಪಡೆಗಳನ್ನು ಮುನ್ನಡೆಸುತ್ತಿರುವ ಭಾಸ್ಕರ್‌, ಈ ವರದಿಗಳೆಲ್ಲ ಕೇವಲ ವದಂತಿಗಳು ಎಂದಿದ್ದಾರೆ.

ಈ ನಡುವೆ ನಾಗಪ್ಪನವರ ಬಿಡುಗಡೆ ಸಂಬಂಧ ರಾಜ್ಯದ ವೀರಶೈವ ಮುಖಂಡರು ಮುಖ್ಯಮಂತ್ರಿ ಕೃಷ್ಣ ಅವರ ಮೇಲೆ ಒತ್ತಡ ಹೇರುತ್ತಿದ್ದು , ವೀರಪ್ಪನ್‌ ಸಮಸ್ಯೆಯ ಜೊತೆಗೆ ರಾಜಕೀಯ ಬಿಕ್ಕಟ್ಟನ್ನೂ ಮುಖ್ಯಮಂತ್ರಿಗಳು ಎದುರಿಸುತ್ತಿದ್ದಾರೆ. ನಾಗಪ್ಪನವರ ಅಪಹರಣ ಕಾರಣದಿಂದಾಗಿಯೇ ಕೃಷ್ಣ ಅಮೆರಿಕ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಶರ್ಮ ವಾಪಸ್ಸು , ಕೆಂಪಯ್ಯಗೆ ಜವಾಬ್ದಾರಿ ?
ಎಸ್‌ಟಿಎಫ್‌ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ, ಎಸ್‌ಟಿಎಫ್‌ ಮುಖ್ಯಸ್ಥರಾಗಿರುವ ಆರ್‌.ಪಿ. ಶರ್ಮಾ ಅವರನ್ನು ಬೆಂಗಳೂರಿಗೆ ವಾಪಸ್ಸು ಕರೆಸಿಕೊಂಡಿದೆ. ಪ್ರಸ್ತುತ ವಿಶೇಷ ಕಾರ್ಯಾಚರಣೆ ಪಡೆಯನ್ನು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ ಅವರು ಮುನ್ನಡೆಸುತ್ತಿದ್ದು , ಕೆಂಪಯ್ಯ ಅವರನ್ನು ಮುಂದಿನ ವಾರ ಎಸ್‌ಟಿಎಫ್‌ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಭಾಸ್ಕರ್‌ ಅವರ ಸೇವಾವಧಿ ಇನ್ನು 30 ದಿನ ಮಾತ್ರ ಬಾಕಿಯುಳಿದಿದೆ.

(ಪಿಟಿಐ / ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X