ನಾಗಪ್ಪ ಬಿಡುಗಡೆಗೆ ಗೋಪ್ಯ ಕಾರ್ಯತಂತ್ರ:ತುಟಿ ಪಿಟಿಕ್ ಎನ್ನದ ಸಚಿವರು
ಬೆಂಗಳೂರು: ನರಹಂತಕ ವೀರಪ್ಪನ್ ಸೆರೆಯಿಂದ ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆಗೊಳಿಸಲು ಅನುಸರಿಸುತ್ತಿರುವ ಕಾರ್ಯತಂತ್ರವನ್ನು ಬಹಿರಂಗಗೊಳಿಸದೇ ಇರಲು ಸರಕಾರ ನಿರ್ಧರಿಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಗಪ್ಪ ಬಿಡುಗಡೆಯ ಬಗ್ಗೆ ಚರ್ಚಿಸಲಾಯಿತು. ಆದರೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಅವರು ನಾಗಪ್ಪ ಬಿಡುಗಡೆಗೆ ಅನುಸರಿಸುತ್ತಿರುವ ತಂತ್ರವನ್ನು ಬಹಿರಂಗಗೊಳಿಸಲು ನಿರಾಕರಿಸಿದರು. ನಾವು ನಮ್ಮ ತಂತ್ರವನ್ನು ಪಾಲಿಸುತ್ತೇವೆ. ಆದರೆ ತಂತ್ರವು ಅತ್ಯಂತ ಗೋಪ್ಯವಾಗಿದ್ದು ಅದನ್ನು ಬಹಿರಂಗ ಮಾಡಲಾಗದು ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಎಲ್ಲ ಪ್ರಶ್ನೆಗಳಿಗೂ ನಾಗಪ್ಪ ಅವರ ಬಿಡುಗಡೆಯ ನಂತರ ಉತ್ತರಿಸಲಾಗುವುದು ಎಂದು ಸಚಿವರು ಉತ್ತರಿಸಿದರು. ಸಂಪುಟ ಸಭೆಯ ಯಾವ ಸಚಿವರೂ ನಾಗಪ್ಪ ಬಿಡುಗಡೆಗೆ ಅನುಸರಿಸುತ್ತಿರುವ ಕಾರ್ಯತಂತ್ರವನ್ನು ಬಹಿರಂಗಗೊಳಿಸಲಿಲ್ಲ. ಸಹಕಾರ ಸಚಿವ ಎಚ್. ವಿಶ್ವನಾಥ್ ಕೂಡ ನಾಗಪ್ಪ ಅವರ ಬಿಡುಗಡೆಗೆ ಸರಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಸೂಕ್ಷ್ಮವಾಗಿ ಯಾವ ತಂತ್ರ ಮಾಡಬೇಕೋ ಅದನ್ನು ಪ್ರಯೋಗಿಸಿದ್ದೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ