ಸಂಧಾನ ಪ್ರಕ್ರಿಯೆ ಸರತಿಯಲ್ಲಿ ನಿಂತ ವೇಣುಗೋಪಲ್,ನೆಡುಮಾರನ್
ಕಾಮಗೆರೆ: ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಧಾನಗೊಳಿಸಲು ಸರಕಾರ ನಿರ್ಧರಿಸಿದ್ದು, ಸಂಧಾನದತ್ತ ಒಲವು ತೋರಿದ ಹಿನ್ನೆಲೆಯಲ್ಲಿ ತಮಿಳು ರಾಷ್ಟ್ರೀಯವಾದಿ ನಾಯಕ ಪಿ. ನೆಡುಮಾರನ್ ಹಾಗೂ ಮೈಸೂರಿನ ವಕೀಲ ವೇಣುಗೋಪಾಲ್ ವೀರಪ್ಪನ್ ಜೊತೆ ಸಂಧಾನಕ್ಕಾಗಿ ಕಾಡಿಗೆ ತೆರಳಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.
ಪೋಟಾ ಕಾಯ್ದೆಯಡಿ ಬಂಧಿತರಾಗಿರುವ ನೆಡುಮಾರನ್ ಅವರು, ಬೇಡಿಕೆ ಬಂದರೆ ಮಾನವೀಯ ನೆಲೆಯಲ್ಲಿ ವೀರಪ್ಪನ್ ಸೆರೆಯಿಂದ ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆಗೋಸ್ಕರ ಕಾಡಿಗೆ ತೆರಳಲು ಸಿದ್ಧರಾಗಿರುವುದಾಗಿ ಹೇಳಿದರು. ಆದರೆ ಅದಕ್ಕೆ ಪ್ರತಿಯಾಗಿ ಸರಕಾರ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕಾಗಿಲ್ಲ. ತಮ್ಮ ಮೇಲಿರುವ ಆಪಾದನೆಯ ಬಗ್ಗೆ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಯಲಿ ಎಂದು ನೆಡುಮಾರನ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನ ವಕೀಲ ವೇಣುಗೋಪಾಲ್ ಟಾಡಾ ನ್ಯಾಯಾಲಯದಲ್ಲಿ ವೀರಪ್ಪನ್ ಸಹಚರರ ಪರವಾಗಿ ವಾದಿಸಿದ್ದರು. ಸಂಧಾನಕ್ಕಾಗಿ ವೀರಪ್ಪನ್ ಬಳಿ ತೆರಳಲು ತಾವು ಸಿದ್ಧರಾಗಿರುವುದಾಗಿ ಹೇಳಿದ ವೇಣುಗೋಪಾಲ, ವೀರಪ್ಪನ್ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಮೂವರು ಪತ್ರಕರ್ತರು ಹಾಗೂ ಇಬ್ಬರು ಹಿರಿಯ ನಾಗರಿಕರನ್ನು ತಮ್ಮ ಜೊತೆ ಕರೆದೊಯ್ಯಬಯಸಿದ್ದಾರೆ.
ಕಾರ್ಯಾಚರಣೆ ಸ್ಥಗಿತಗೊಳಿಸಲು ಸಂಧಾನ ಪ್ರಕ್ರಿಯೆ ನಡೆಸಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕೂಡ ಒಲವು ತೋರಿಸಿದ್ದಾರೆ ಎಂದು ಗುರುವಾರ ಮುಖ್ಯಮಂತ್ರಿಯವರನ್ನು ಭೇಟಿಯಾದ ವೇಣುಗೋಪಾಲ್ ನಂತರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ ಸಂಧಾನಕ್ಕೂ ಮುಂಚೆ ವೀರಪ್ಪನ್ ಜೊತೆ ಸಂಪರ್ಕ ಸಾಧಿಸುವಂತೆ ಕೃಷ್ಣ ಸೂಚಿಸಿರುವುದಾಗಿ ವೇಣುಗೋಪಾಲ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ