ಅಲ್ಲಿ ಸಮ್ಮೇಳನದ ಸಂಭ್ರಮ, ಇಲ್ಲಿ ಬರ ಪರಿಹಾರ ಕಾಮಗಾರಿ
ಬೆಂಗಳೂರು : ಅಮೆರಿಕೆ ನೆಲದಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆರಂಭವಾಗಿ ಡೆಟ್ರಾಯಿಟ್ ತುಂಬ ಕನ್ನಡದ ಕಂಪು ತುಂಬಿಕೊಳ್ಳುತ್ತಿದ್ದಂತೆಯೇ, ಇತ್ತ ಕರ್ನಾಟಕದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬರ ಪೀಡಿತ ಪ್ರದೇಶಗಳಲ್ಲಿನ ಬರ ಪರಿಹಾರ ಕಾರ್ಯಕ್ರಮಗಳಿಗಾಗಿ ಪ್ರಕೋಪ ಪರಿಹಾರ ನಿಧಿಯಿಂದ 24 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿನ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಸಂಪುಟ ಸಭೆ ಪರಿಶೀಲನೆ ನಡೆಸಿತು. ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲು ಸಭೆ ನಿರ್ಧರಿಸಿತು. ಪ್ರಸ್ತುತ 60 ಸಾವಿರ ಮೆಟ್ರಿಕ್ ಟನ್ ಆಹಾರ ಕಾಳುಗಳನ್ನು ಸರ್ಕಾರ ಹೊಂದಿದ್ದು - ಬರ ಪೀಡಿತ ಪ್ರದೇಶಗಳಲ್ಲಿ ಕೂಳಿಗಾಗಿ ಕಾಳು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಕಾಗೋಡು ಹೇಳಿದರು.
ಕನಿಷ್ಠ 5 ಲಕ್ಷ ಮೆಟ್ರಿಕ್ ಟನ್ ಆಹಾರ ಕಾಳುಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿದೆ. ಈ ಸಂಬಂಧ ಕೇಂದ್ರ ಸಚಿವರಾದ ಅಜಿತ್ಸಿಂಗ್ ಹಾಗೂ ಶಾಂತ ಕುಮಾರ್ ಅವರೊಂದಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ.ಘೋರ್ಪಡೆ ಗುರುವಾರ ದೆಹಲಿಯಲ್ಲಿ ಚರ್ಚಿಸಿದ್ದಾರೆ.
ಕುಡಿಯುವ ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು 38 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲು ಕೂಡ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...