ನಾಲ್ಕು ಬೆಟಾಲಿಯನ್ ಪ್ಯಾರಾ ಮಿಲಿಟರಿ ಪಡೆಗೆ ಕರ್ನಾಟಕದ ಕೋರಿಕೆ
ಬೆಂಗಳೂರು : ನರಹಂತಕ ವೀರಪ್ಪನ್ ಶಿಕಾರಿಗಾಗಿ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ನೆರವು ಕೋರಿದ್ದು ಎಸ್ಟಿಎಫ್ಗೆ ನೆರವಾಗುವ ನಿಟ್ಟಿನಲ್ಲಿ ನಾಲ್ಕು ಬೆಟಾಲಿಯನ್ ಪ್ಯಾರಾ ಮಿಲಿಟರಿ ಪಡೆಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದೆ.
ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ವಿಷಯವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಎರಡು ಪ್ರತ್ಯೇಕ ಸಿಆರ್ಪಿಎಫ್ ಪಡೆಗಳು ಹಾಗೂ ರ್ಯಾಪಿಡ್ ಆ್ಯಕ್ಷನ್ಫೋರ್ಸ್ ಹಾಗೂ ಕಮಾಂಡೋಗಳನ್ನು ಕಳುಹಿಸಿಕೊಡುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿಕೊಳ್ಳಲಾಗಿದೆ ಎಂದರು.
ಡಿಜಿಪಿ ವಿವಿ ಭಾಸ್ಕರ್ ಅವರ ನೇತೃತ್ವದಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ತಮಿಳುನಾಡು ಎಸ್ಟಿಎಫ್ ಮುಖ್ಯಸ್ಥ ವಾಲ್ಟರ್ ಥೇವಾರಂ ಅವರ ನೇತೃತ್ವದಲ್ಲಿ ಗುಂಡಾಲ್ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಕಾರ್ಯಾಚರಣೆ ಚುರುಕಾಗಿದೆ. ಈ ನಡುವೆ ಮಾಜಿ ಸಚಿವ ನಾಗಪ್ಪ ಅವರ ಮಗ ಪ್ರದೀಪ್ ಅವರು ತಮ್ಮ ತಂದೆಯವರನ್ನು ಬೇಗನೆ ವೀರಪ್ಪನ್ ಸೆರೆಯಿಂದ ಬಿಡಿಸುವಂತೆ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ನಡುವೆ ಕರ್ನಾಟಕವು ಮಾಜಿ ಸಚಿವ ನಾಗಪ್ಪ ಅವರ ಬಿಡುಗಡೆಗೋಸ್ಕರ ಸಂಧಾನ ಮಾರ್ಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಆದರೆ ಸಂದರ್ಭ ಬಂದರೆ ಕಾರ್ಯಾಚರಣೆಗೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ. ಬಿ. ಚಂದ್ರೇಗೌಡ ತಿಳಿಸಿದ್ದಾರೆ.
ಸರಕಾರ ಸಂಧಾನಕಾರರಿಗಾಗಿ ಎದುರುನೋಡುತ್ತಿದೆ. ವೀರಪ್ಪನ್ ಜೊತೆಗೆ ಸಮರ್ಥವಾಗಿ ಸಂಧಾನ ಕಾರ್ಯ ನಡೆಸಲು ಉತ್ಸುಕರಾಗಿರುವವರು ಮುಂದೆ ಬರಬಹುದು ಎಂದು ಚಂದ್ರೇಗೌಡ ಹೇಳಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ