ಭಾಷಾ ದ್ವೇಷ ತೋರದಂತೆ ರಾಜ್ಯದ ಜನತೆಗೆ ಸಿಎಂ ಕೃಷ್ಣ ಮನವಿ
ಬೆಂಗಳೂರು : ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಬಂಧನದಿಂದ ಬಿಡುಗಡೆಗೊಳಿಸಲು ಅನುಸರಿಸಿದ ತಂತ್ರವನ್ನೇ ಮಾಜಿ ಸಚಿವ ಎಚ್. ನಾಗಪ್ಪ ಅವರ ಬಿಡುಗಡೆಗೂ ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಹೇಳಿದ್ದಾರೆ.
ನಾಗಪ್ಪ ಅಪಹರಣದ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಸಚಿವ ಸಂಪುಟ ಸಭೆಯ ನಂತರ ಎಸ್. ಎಂ. ಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದ ಜನತೆ ರಾಜ್ಕುಮಾರ್ ಅಪಹರಣ ನಡೆದ ಸಂದರ್ಭದಲ್ಲಿ ತೋರಿದ ಶಾಂತಿ ಮತ್ತು ಸಂಯಮವನ್ನು ಈಗಲೂ ತೋರಬೇಕು.
ಅಪಹರಣ ಪ್ರಸಂಗ ಅತ್ಯಂತ ದುರದೃಷ್ಟಕರ. ನಾಗಪ್ಪ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವುದಕ್ಕೆ ಸರಕಾರ ಆದ್ಯತೆ ನೀಡುತ್ತದೆ. ಈ ಸಂದರ್ಭದಲ್ಲಿ ಭಾಷೆಯ ದ್ವೇಷ ಮಾಡಬಾರದು ಎಂದು ಕೃಷ್ಣ ರಾಜ್ಯದ ಜನತೆಯನ್ನು ಕೋರಿಕೊಂಡರು.
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮಂಗಳವಾರ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಕೃಷ್ಣ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ವೀರಪ್ಪನ್ ಬಂಧನದಿಂದ ನಾಗಪ್ಪ ಅವರ ಬಿಡುಗಡೆ ಹಾಗೂ ವೀರಪ್ಪನ್ ಕಾರ್ಯಾಚರಣೆಯ ಬಗ್ಗೆ ಚರ್ಚೆ ನಡೆಸುವುದಾಗಿ ಕೃಷ್ಣ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣ ಗಾರುಡಿ