ನರಹಂತಕ ವೀರಪ್ಪನ್ ಕಳುಹಿಸಿರುವ ಮಿನಿ ಕ್ಯಾಸೆಟ್ನಲ್ಲಿ ಏನಿದೆ?
ಚಾಮರಾಜನಗರ: ಮಾಜಿ ಸಚಿವ ಎಚ್. ನಾಗಪ್ಪ ಅಪಹರಣದ ನಂತರ ವೀರಪ್ಪನ್ ಸಂದೇಶವನ್ನು ಹೊತ್ತ ಕ್ಯಾಸೆಟ್ನ್ನು ನಾಗಪ್ಪ ಅವರ ಮನೆಗೆ ತಲುಪಿಸಲಾಗಿದೆ.
ಗುರುಸ್ವಾಮಿ ಎಂಬಾತನ ಮೂಲಕ ಆಡಿಯೋ ಕ್ಯಾಸೆಟ್ ಒಂದನ್ನು ನಾಗಪ್ಪ ಅವರ ಪತ್ನಿ ಪರಿಮಳ ಅವರಿಗೆ ವೀರಪ್ಪನ್ ಕಳುಹಿಸಿದ್ದಾನೆ. ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ರಾಜ್ ಪರಹರಣದ ವೇಳೆ ತನಗೆ ನೀಡಿದ್ದ ಆಶ್ವಾಸನೆಯಂತೆ ನಡೆದುಕೊಂಡಿಲ್ಲ ಎಂಬ ಆಕ್ರೋಶವನ್ನು ವೀರಪ್ಪನ್ ಕ್ಯಾಸೆಟ್ನಲ್ಲಿ ವ್ಯಕ್ತಪಡಿಸಿದ್ದಾನೆ.
ಕ್ಯಾಸೆಟ್ 55 ನಿಮಿಷಗಳಷ್ಟಿದ್ದು, ಇಬ್ಬರೂ ಮುಖ್ಯಮಂತ್ರಿಗಳು ನನಗೆ ಮೋಸ ಮಾಡಿದ್ದಾರೆ. ಈ ಬಾರಿಯೂ ಹಾಗೆ ಮಾಡಬೇಡಿ. ಕರ್ನಾಟಕ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಿಬ್ಬರೂ ಸೇರಿ ನನ್ನ ಬೇಡಿಕೆ ಈಡೇರಿಸಿ. ಬದಲಾಗಿ ನನ್ನ ಹಿಂದೆ ಪೊಲೀಸ್ ಕಳುಹಿಸಿದರೆ ಒತ್ತೆಯಾಳುಗಳ ತಲೆ ತೆಗೆಯುವುದಾಗಿ ವೀರಪ್ಪನ್ ಎಚ್ಚರಿಕೆ ನೀಡಿದ್ದಾನೆ.
ಕ್ಯಾಸೆಟ್ನಲ್ಲಿರುವ ಬೇಡಿಕೆಗಳು : ‘ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡಿ. 8 ದಿನಗಳ ನಂತರ ಮತ್ತೊಂದು ಕ್ಯಾಸೆಟ್ ಕಳುಹಿಸುವೆ’ ಎಂಬ ಹೊಸ ಬೇಡಿಕೆಯನ್ನು ವೀರಪ್ಪನ್ ಮುಂದಿಟ್ಟಿದ್ದರೂ, ಜೈಲಿನಲ್ಲಿರುವ ಯಾರನ್ನು ಬಿಡುಗಡೆ ಮಾಡಬೇಕು ಎಂಬುದನ್ನು ಆತ ಸ್ಪಷ್ಟವಾಗಿ ಹೇಳಿಲ್ಲ.
ಆದರೆ ಅಧಿಕಾರಿಗಳ ಊಹೆಯ ಪ್ರಕಾರ ಮೈಸೂರಿನ ಕಾರಾಗೃಹದಲ್ಲಿರುವ ತನ್ನದೇ ಆದ ಜನರ ಬಗ್ಗೆ ಆತ ಹೇಳುತ್ತಿರಬಹುದು. ಅಥವಾ ಪೋಟಾ ಕಾಯ್ದೆಯಡಿ ಬಂಧಿತರಾದ ಪಿ. ನೆಡುಮಾರನ್, ರಾಜ್ ಬಿಡುಗಡೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಳೆತ್ತೂರು ಮಣಿ ಹಾಗೂ ನಕ್ಕೀರನ್ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯಂ ಅವರನ್ನು ಕುರಿತಾಗಿರಬಹುದು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ