ವೀರಪ್ಪನ್ ದೇಶದ ಸಮಸ್ಯೆ, ನೆರವು ನೀಡಲು ಕೇಂದ್ರ ಸಿದ್ಧ-ಅಡ್ವಾಣಿ
ಬೆಂಗಳೂರು : ನರಹಂತಕ ವೀರಪ್ಪನ್ ಶಿಕಾರಿಗೆ ಕೇಂದ್ರ ಪಡೆಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಘೋಷಿಸಿದ್ದಾರೆ.
ವೀರಪ್ಪನ್ ಸಮಸ್ಯೆ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ . ವೀರಪ್ಪನ್ ಇಡೀ ದೇಶದ ಸಮಸ್ಯೆಯಾಗಿ ಪರಿಣಮಿಸಿದ್ದಾನೆ ಎಂದು ಮಂಗಳವಾರ (ಆ.27) ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವಾಣಿ ತಿಳಿಸಿದರು.
ಈ ಮುನ್ನ ವೀರಪ್ಪನ್ ಶಿಕಾರಿಗಾಗಿ ರಾಜ್ಯ ಸರ್ಕಾರ ನೆರವು ಕೋರಿದ ಸಂದರ್ಭಗಳಲ್ಲೆಲ್ಲ ಕೇಂದ್ರ ಸರ್ಕಾರ ನೆರವು ನೀಡಿದೆ. ಪ್ರಸ್ತುತ ಕೂಡ ಅಂಥದ್ದೇ ಸಂದರ್ಭ ಮರುಕಳಿಸಿದೆ ಎಂದು ಅಡ್ವಾಣಿ ತಿಳಿಸಿದರು. ದಕ್ಷಿಣ ಭಾರತ ಬಿಜೆಪಿ ಘಟಕಗಳ ಚುನಾಯಿತ ಪ್ರತಿನಿಧಿಗಳ ಎರಡು ದಿನಗಳ ಸಭೆಯನ್ನು ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇದಕ್ಕೂ ಮುನ್ನ ಅಡ್ವಾಣಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ- ವೀರಪ್ಪನ್ ಸೆರೆಯಿಂದ ಮಾಜಿ ಸಚಿವ ಎಚ್.ನಾಗಪ್ಪನವರನ್ನು ಬಿಡಿಸಲು ಹಾಗೂ ವೀರಪ್ಪನ್ ಪ್ರಕರಣಕ್ಕೆ ಮುಕ್ತಾಯ ನೀಡಲು ಕೇಂದ್ರದ ನೆರವನ್ನು ಕೋರಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ- ಪ್ಯಾರಾ ಮಿಲಿಟರಿ ಪಡೆ, ಕಮಾಂಡೊಗಳನ್ನು ಒದಗಿಸುವುದು ಸೇರಿದಂತೆ ಎಲ್ಲ ರೀತಿಯ ನೆರವು ನೀಡುವುದಾಗಿ ಅಡ್ವಾಣಿ ತಮಗೆ ಭರವಸೆ ನೀಡಿರುವುದಾಗಿ ಹೇಳಿದರು.
ಎಸ್ಟಿಎಫ್ ಜಂಟಿ ಪಡೆಗಳ ಮುಖ್ಯಸ್ಥ ವಾಲ್ಟರ್ ಥೇವಾರಂ ನೇತೃತ್ವದಲ್ಲಿ ವೀರಪ್ಪನ್ ಶಿಕಾರಿ ಮುಂದುವರಿಯಲಿದೆ. ಎಸ್ಟಿಎಫ್ ತನ್ನ ಕೆಲಸ ಮಾಡುತ್ತಿದೆ. ಅದರಲ್ಲಿ ಮೂಗು ತೂರಿಸಲು ನಾವು ಬಯಸುವುದಿಲ್ಲ . ಆದರೆ, ಪ್ರಸ್ತುತ ಸಂದರ್ಭದಲ್ಲಿ ವೀರಪ್ಪನ್ನ ಬೇಡಿಕೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಮಾಜಿ ಸಚಿವ ನಾಗಪ್ಪನವರ ಬಿಡುಗಡೆ ನಮ್ಮ ಆದ್ಯತೆ ಎಂದು ಖರ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ನಾಗಪ್ಪನವರ ಬಿಡುಗಡೆಗೆ ಸಂಧಾನಕಾರರನ್ನು ಕಳುಹಿಸುವ ಕುರಿತು ಸರ್ಕಾರ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ ಎಂದು ಖರ್ಗೆ ಹೇಳಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ