ಕಾವೇರಿ ಕೂಗು ; ಭಾನುವಾರ ಕೃಷ್ಣ ನೇತೃತ್ವದಿ ಸರ್ವಪಕ್ಷ ಸಭೆ
ಬೆಂಗಳೂರು : ಕಾವೇರಿ ನದಿ ನೀರಿನ ಸಮಸ್ಯೆಯ ಕುರಿತು ರಾಜ್ಯದ ನಿಲುವಿನ ಕುರಿತು ಒಮ್ಮತ ಸಾಧಿಸಲು ಆ.25 ರ ಭಾನುವಾರ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.
ಪ್ರಧಾನಮಂತ್ರಿ ಎ.ಬಿ.ವಾಜಪೇಯಿ ಅವರು ಆ.27ರಂದು ಕರೆದಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಪ್ರತಿಪಾದಿಸಬೇಕಾದ ವಿಷಯಗಳನ್ನು ಕುರಿತು ಪ್ರತಿಪಕ್ಷಗಳ ಅಭಿಪ್ರಾಯವನ್ನು ಪಡೆಯಲು ಭಾನುವಾರದ ಸಭೆ ಕರೆಯಲಾಗಿದೆ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹಿಂದೆಂದಿಗಿಂತ ಕಡಿಮೆ ಪ್ರಮಾಣದಲ್ಲಿದೆ. ಮಳೆ ಕೈಕೊಟ್ಟಿರುವ ಪ್ರಸಕ್ತ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಚಂದ್ರೇಗೌಡ ತಿಳಿಸಿದರು.
ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರ ಮಾಹಿತಿ ಒದಗಿಸಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಮಳೆಯ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು - ರಾಜ್ಯದ 175 ತಾಲ್ಲೂಕುಗಳ ಪೈಕಿ 152 ತಾಲ್ಲೂಕುಗಳು ಬರದ ದವಡೆಗೆ ಸಿಲುಕಿವೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಹೇಮಾವತಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳಲ್ಲಿ ಕರ್ನಾಟಕ 20 ಟಿಎಂಸಿ ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಸಚಿವ ಚಂದ್ರೇಗೌಡ ತಿಳಿಸಿದರು.
(ಪಿಟಿಐ)
ಮುಖಪುಟ / ಕೃಷ್ಣ ಗಾರುಡಿ