ರಾಜ್ಯದ 14ನೇ ರಾಜ್ಯಪಾಲರಾಗಿ ಚತುರ್ವೇದಿ ಪ್ರಮಾಣವಚನ
ಬೆಂಗಳೂರು : ರಾಜ್ಯದ 14 ನೇ ರಾಜ್ಯಪಾಲರಾಗಿ ಭಾರತೀಯ ಜನತಾಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ತ್ರಿಲೋಕನಾಥ ಚತುರ್ವೇದಿ ಅವರು ಬುಧವಾರ (ಆ.21) ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ಕೆ.ಜೈನ್ ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಿದರು. ಈ ಮುನ್ನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಅವರ ಅಧಿಕಾರಾವಧಿ ಜುಲೈ 25 ರಂದು ಕೊನೆಗೊಂಡಿದ್ದು, ತೆರವಾದ ಸ್ಥಾನವನ್ನು ಚತುರ್ವೇದಿ ತುಂಬಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚತುರ್ವೇದಿ, ಕೇಂದ್ರ ಸರ್ಕಾರ ಅಥವಾ ಯಾರೊಬ್ಬರ ಏಜೆಂಟ್ನಂತೆ ತಾವು ಕಾರ್ಯ ನಿರ್ವಹಿಸುವುದಿಲ್ಲ ಎಂದರು. ಜನತೆಯನ್ನು ಭೇಟಿ ಮಾಡುವ ಹಾಗೂ ಅವರ ಅಹವಾಲುಗಳನ್ನು ಆಲಿಸುವ ಮೂಲಕ ‘ವಾಚ್ ಟವರ್’ ನಂತೆ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯಪಾಲರ ಕರ್ತವ್ಯ ಏನೆಂಬುದು ತಮಗೆ ತಿಳಿದಿದೆ ಎಂದು ಭಾರತದ ಆಡಿಟರ್ ಜನರಲ್ ಆಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿರುವ ಚತುರ್ವೇದಿ ಹೇಳಿದರು.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗಿನ ತಮ್ಮ ಸಾಂಗತ್ಯದ ದಿನಗಳನ್ನು ರಾಜ್ಯಪಾಲರು ನೆನಪಿಸಿಕೊಂಡರು. ಕೃಷ್ಣ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ ಹಾಗೂ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ - ಚತುರ್ವೇದಿ ಅವರು ಕೃಷ್ಣರ ಜೊತೆ ಒಡನಾಟ ಹೊಂದಿದ್ದರು.
ಮಾಜಿ ಐಎಎಸ್ ಅಧಿಕಾರಿಯಾದ ಚತುರ್ವೇದಿ ಅವರು ಈ ಮುನ್ನ- ದೆಹಲಿ ಆಡಳಿತದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ, ಚಂಡೀಘರ್ನ ಮುಖ್ಯ ಆಯುಕ್ತರಾಗಿ, ಕೇಂದ್ರ ಗೃಹ ಕಾರ್ಯದರ್ಶಿಯಾಗಿ, ಯುನೆಸ್ಕೊದ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಜಾರ್ಖಂಡ್ ರಾಜ್ಯಪಾಲ ರಾಮಾ ಜೋಯಿಸ್, ಮುಖ್ಯಮಂತ್ರಿ ಕೃಷ್ಣ, ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು.
(ಪಿಟಿಐ)
ಮುಖಪುಟ
/
ಇವತ್ತು...
ಈ
ಹೊತ್ತು...