‘ಎಸ್.ಎಂ.ಕೃಷ್ಣಗೆ ದೇವರಾಜ್ ಅರಸು ಹೆಸರೆತ್ತುವ ನೈತಿಕ ಹಕ್ಕೂ ಇಲ್ಲ’
ಬೆಂಗಳೂರು : ಬಡವರ ಬಗ್ಗೆ ಬಣ್ಣ ಬಣ್ಣದ ಮಾತಾಡುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ದೇವರಾಜ ಅರಸು ಅವರ ಹೆಸರೆತ್ತುವ ನೈತಿಕ ಹಕ್ಕೂ ಇಲ್ಲ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಕಟಕಿಯಾಡಿದ್ದಾರೆ.
ಮಂಗಳವಾರ ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 87ನೇ ಜಯಂತಿ ಆಚರಣೆಯ ವೇದಿಕೆ ಸಿದ್ಧರಾಮಯ್ಯ ಪಾಲಿಗೆ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅವಕಾಶವಾಗಿ ಪರಿವರ್ತಿತವಾಯಿತು. ಅರಸು ಸಾಧನೆಗಳ ಗುಣಗಾನಕ್ಕಿಂತ ಮುಖ್ಯಮಂತ್ರಿ ಕೃಷ್ಣ ಮೇಲೆ ಬಯ್ಗುಳಗಳ ಬಾಣ ಎಸೆದಿದ್ದೇ ಹೆಚ್ಚು.
ಅವರ ಮಾತಿನ ಸಾರ ಹೀಗಿದೆ...
‘ಏಳೂವರೆ ವರ್ಷಗಳವರೆಗೆ ಅಧಿಕಾರದಲ್ಲಿರುವುದಾಗಿ ಮುಖ್ಯಮಂತ್ರಿಗಳು ಜಂಭದ ಮಾತಾಡಿದ್ದಾರೆ. ರಾಜ್ಯದ ಜನತೆ ಅವರಿಗೇನು ಪವರ್ ಆಫ್ ಅಟಾರ್ನಿ ನೀಡಿದೆಯಾ? 2004ರ ಚುನಾವಣೆಯಲ್ಲಿ ಅವರಿಗೆ ಜನ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋವರೆಗೆ ನಾವೇನು ಕಡ್ಲೆಪುರಿ ತಿನ್ನುತ್ತಾ ಕೂತಿರುತ್ತೇವಾ? ಪಕ್ಷದ ಕಾರ್ಯಕರ್ತರೆಲ್ಲಾ ಮುಖ್ಯಮಂತ್ರಿಗಳ ಸೋಗಲಾಡಿತನವನ್ನು ಜನಕ್ಕೆ ಸಾರಬೇಕು.
‘ದೇವರಾಜ ಅರಸು ಅವರ ಬಡವರ ಪರವಾದ ಕಾರ್ಯಕ್ರಮಗಳಿಗೆ ಕೃಷ್ಣ ಅವರಿಗೆ ಒಳಗೊಳಗೇ ವಿರೋಧ ಇತ್ತು. ಬಹಿರಂಗವಾಗಿ ಅದನ್ನು ಹೇಳದೆ, ರಾಜೀನಾಮೆ ನೀಡಿ ಮಂಡ್ಯದಲ್ಲಿ ಪ್ರಾಯಶ್ಚಿತ್ತದ ನೆಪ ಒಡ್ಡಿ ಸತ್ಯಾಗ್ರಹ ನಡೆಸಿದರು. ಅರಸು ಅವರ ಒಳ್ಳೆಯ ಕಾರ್ಯಕ್ರಮಗಳು ಅವರ ಸರ್ಕಾರದ್ದೇ ಹೊರತು ಕಾಂಗ್ರೆಸ್ ಪಕ್ಷದ್ದಲ್ಲ’.
ಭಾರತಿ ಅರಸ್, ಸಿ.ನಾರಾಯಣ ಸ್ವಾಮಿ, ಬಿ.ಟಿ.ಲಲಿತಾ ನಾಯಕ್, ಡಾ.ಎಚ್.ಸಿ.ಮಹಾದೇವಪ್ಪ, ಬಸವರಾಜ ಬೊಮ್ಮಾಯಿ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ್ ಅವರನ್ನು ಜಾತ್ಯತೀತ ಜನತಾ ದಳಕ್ಕೆ ಸೇರಿಸಿಕೊಳ್ಳಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣ ಗಾರುಡಿ