ಪುನಶ್ಚೇತನದ ಹಂಬಲದಲ್ಲಿ ಬೇರುಗಳತ್ತ ಸಂಯುಕ್ತ ದಳ ಗಮನ
ಬೆಂಗಳೂರು : ತಳ ಮಟ್ಟದಿಂದ ಸಂಘಟಿಸುವ ಮೂಲಕ ಪಕ್ಷವನ್ನು ಬಲಪಡಿಸಲು ಸಂಯುಕ್ತ ಜನತಾದಳ ರಾಜ್ಯ ಘಟಕ ನಿರ್ಧರಿಸಿದೆ.
ಪಕ್ಷಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಪ್ರಾಂತೀಯ ಹಾಗೂ ವಿಭಾಗೀಯ ಮಟ್ಟದ ಅಲ್ಪ ಸಂಖ್ಯಾತರ ಸಮಾವೇಶಗಳು ಮತ್ತು ಮಹಿಳೆಯರ ವಿಂಗ್ಗಳನ್ನು ಪ್ರಾರಂಭಿಸಲು ಗುರುವಾರ (ಆ.16) ಬೆಂಗಳೂರಿನಲ್ಲಿ ಸಭೆ ಸೇರಿದ ಪಕ್ಷದ ನಾಯಕರು ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳಗಳ ವಿಲೀನದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಸಭೆ, ಹಿರಿಯ ನಾಯಕರಾದ ರಾಮಕೃಷ್ಣ ಹೆಗಡೆ ಇನ್ನಿತರ ನಾಯಕರು ಪಕ್ಷವನ್ನು ಬಲಪಡಿಸುವ ತೀರ್ಮಾನಗಳನ್ನು ಕೈಗೊಳ್ಳುವರೆಂದು ಅಭಿಪ್ರಾಯಪಟ್ಟಿತು. ಉಭಯ ದಳಗಳ ವಿಲೀನದ ವಿಷಯವನ್ನು ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರಿಗೆ ವಹಿಸಿರುವ ವಿಷಯವನ್ನೂ ಪ್ರಸ್ತಾಪಿಸಿದ ಸಭೆ- ಬೊಮ್ಮಾಯಿ ಅವರು ವಿಲೀನ ಸೂತ್ರವೊಂದನ್ನು ರೂಪಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿತು.
ರಾಜ್ಯ ಘಟಕದ ಕಾರ್ಯ ನಿರತ ಅಧ್ಯಕ್ಷ ಕೆ.ಬಿ.ಶಾಣಪ್ಪ ಹಾಗೂ ಸಂಸದೀಯ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ್ ಇನ್ನಿತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
(ಪಿಟಿಐ)
ಮುಖಪುಟ
/
ಇವತ್ತು...
ಈ
ಹೊತ್ತು...