ಬೆಂಗಳೂರಲ್ಲಿ ಹಾಡಹಗಲೇ ಗುಂಡಿನ ದಾಳಿ : 8 ಲಕ್ಷ ರು. ದರೋಡೆ
ಬೆಂಗಳೂರು : ರಿಚ್ಮಂಡ್ ಟೌನ್ನಲ್ಲಿ ಸೋಮವಾರ ಮಟ ಮಟ ಮಧ್ಯಾಹ್ನವೇ ಬ್ಯಾಂಕಿನಿಂದ ದುಡ್ಡು ಡ್ರಾ ಮಾಡಿ ಬರುತ್ತಿದ್ದ ಒಬ್ಬ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ, 8 ಲಕ್ಷ ರುಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ. ಗಾಯಾಳು ಸ್ಥಿತಿ ಗಂಭೀರವಾಗಿದ್ದು, ಈಗ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾದಿಂದ ದುಡ್ಡನ್ನು ಪಡೆದ ಮೋಹನ್ ಅಸೋಸಿಯೇಟ್ಸ್ನ ನೌಕರ ಕಾರು ಹತ್ತಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆಗ ಸಮಯ ಮಧ್ಯಹ್ನ 2 ಗಂಟೆ. ಇಬ್ಬರು ಯುವಕರು ಹಠಾತ್ತನೆ ಕಪ್ಪು ಬಣ್ಣದ ಯಮಹಾ ಬೈಕ್ನಲ್ಲಿ ನುಗ್ಗಿ ಬಂದು, ಮೊದಲು ಗಾಳಿಯಲ್ಲಿ ಒಂದು ಗುಂಡು ಹಾರಿಸಿ, ನಂತರ ವ್ಯಕ್ತಿಗೇ ಗುಂಡು ಹೊಡೆದು ಹಣ ದೋಚಿ ಪರಾರಿಯಾದರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನೆ ನಡೆದ ಎಷ್ಟೋ ನಿಮಿಷಗಳ ನಂತರ ಜಂಟಿ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಹಾಗೂ ಡಿಸಿಪಿ ಗೋಪಾಲ್ ಹೊಸೂರ್ ಸ್ಥಳಕ್ಕೆ ಭೇಟಿ ಕೊಟ್ಟರು. ನಾಕಾಬಂಧಿ ನಡೆಸಿ, ದರೋಡೆಕೋರರ ವಾಹನ ಪತ್ತೆ ಮಾಡಲು ಪೊಲೀಸರಿಗೆ ಸ್ಥಳದಲ್ಲೇ ಆದೇಶ ಕೊಟ್ಟರು. ಇಬ್ಬರು ದರೋಡೆಕೋರರ ಪೈಕಿ ಒಬ್ಬ ದಪ್ಪಗಿದ್ದು, ಕಪ್ಪು ಬಣ್ಣದ ಅಂಗಿ ತೊಟ್ಟಿದ್ದ ಹಾಗೂ ಮತ್ತೊಬ್ಬ ತೆಳ್ಳಗಿದ್ದ ಎಂದು ಪೊಲೀಸರು ಹೇಳಿದರು.
ಬಾಣಸವಾಡಿ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೇ ಘಟನೆ ಕೆಲವೇ ದಿನಗಳ ಹಿಂದೆ ನಡೆದಿತ್ತು. ಆಗ ಹಣ ದೋಚಿದ್ದ ದರೋಡೆಕೋರರೂ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಘಟನೆ ನಡೆದಿರುವ ಸ್ಥಳದ ನಾಗರಿಕರು ಚಿಂತಾಕ್ರಾಂತರಾಗಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...