ಓಬಿರಾಯನ ಕಾಲದ ಕಾನೂನು ಬದಲಾಗಬೇಕು-ನಾರಾಯಣ ಮೂರ್ತಿ
ಬೆಂಗಳೂರು: ಆಧುನಿಕ ಕಾಲಕ್ಕೆ ಪ್ರಸ್ತುತವಲ್ಲದ ಪುರಾತನವಾದ ದಿವಾಳಿ ಕಾನೂನುಗಳನ್ನು ಬದಲಾಯಿಸಬೇಕು ಎಂದು ಇನ್ಫೋ ಸಿಸ್ನ ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ ನಗರದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿಯ ಘಟಿಕೋತ್ಸವದಲ್ಲಿ ಮಾತನಾಡುತ್ತ, ಬಂಡವಾಳ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡುವ ಅತ್ಯುತ್ತಮ ಕಾನೂನು ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಅದರಿಂದ ಜಾಗತಿಕ ಬಂಡವಾಳವನ್ನು ಆಕರ್ಷಿಸುವುದಕ್ಕೆ ಅನುಕೂಲವಾಗುತ್ತದೆ ಎಂದರು.
ಭಾರತೀಯ ಉದ್ಯಮಿಗಳಿಗೆ ಜಾಗತೀಕರಣವನ್ನು ಎದುರಿಸಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸಿಕೊಡುವುದು ಕಾನೂನು ಅಧಿಕಾರಿಗಳ ಕರ್ತವ್ಯ. ಭಾರತೀಯ ಉದ್ಯಮಿಗಳು ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ನಿರಂತ ಎದುರು ನೋಡುತ್ತಿದ್ದಾರೆ. ಕಾನೂನು ಅಧಿಕಾರಿಗಳು ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ, ಭಾರತೀಯ ಉದ್ಯಮಿಗಳಿಗೆ ಪೂರಕವಾಗುವಂತಹ ಹಾದಿಯನ್ನು ತೋರಿಸಬೇಕು ಎಂದು ಮೂರ್ತಿ ಹೇಳಿದರು.
ನಮ್ಮ ದೇಶದ ಉದ್ದಗಲಕ್ಕೂ ಕಾನೂನು ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿವೆ. ಅಂತರರಾಷ್ಟ್ರೀಯ ಕಾನೂನುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಕಾನೂನು ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯಾಂದಿಗೆ ಸ್ಪರ್ಧಾತ್ಮಕವಾಗಿರುವುದು ಇವತ್ತಿನ ಜರೂರತ್ತು. ಆದ್ದರಿಂದ ಭಾರತೀಯ ಕಾನೂನು ಅಧಿಕಾರಿಗಳು ಜಗತ್ತಿನಲ್ಲಿರುವ ಅತ್ಯುತ್ತಮ ಕಾನೂನು ವ್ಯವಸ್ಥೆಯನ್ನು ಅಭ್ಯಾಸ ಮಾಡಬೇಕು ಎಂದು ಮೂರ್ತಿ ಸಲಹೆಮಾಡಿದರು.
ಕಾನೂನು ಅಧಿಕಾರಿಗಳು ತಮ್ಮ ವೃತ್ತಿ ಕ್ಷೇತ್ರದ ಸ್ಪರ್ಧೆಯನ್ನು ಎದುರಿಸಲು ನಿರಂತರ ಕಾನೂನು ಶಿಕ್ಷಣ(Continuing Legal Education) ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಉತ್ತಮ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉದ್ಯೋಗ ವಲಯದ ಬೇಡಿಕೆ ಹಾಗೂ ಪೂರೈಕೆ ನಡುವೆ ತೀರಾ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡಿದಲ್ಲಿ ನ್ಯಾಯಾಂಗ ವ್ಯವಸ್ಥೆಯು ಬಲಿಷ್ಟವಾಗುವುದರಲ್ಲಿ ಸಂಶಯವಿಲ್ಲ ಎಂದು ಮೂರ್ತಿ ಹೇಳಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ