ಕರ್ನಾಟಕ ವಿವಿಯನ್ನ ನಷ್ಟಕ್ಕೆ ನೂಕಿರುವುದು ಸ್ವತಃ ಸಿಬ್ಬಂದಿಗಳೇ?
ಧಾರವಾಡ : ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ವಿಶೇಷ ಲೆಕ್ಕ ತಪಾಸಣೆ ನಡೆಸಿದ್ದು ಅರ್ಹತೆಯ ಹೆಸರಿನಲ್ಲಿ ಸಿಕ್ಕಸಿಕ್ಕವರಿಗೆ ಬಡ್ತಿ ಹಾಗೂ ಸಂಬಳ ನೀಡಿರುವುದರಿಂದ ಒಂದು ಕೋಟಿಗೂ ಹೆಚ್ಚು ಹಣ ನಷ್ಟವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಣಕಾಸು ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ವಿಶೇಷ ಲೆಕ್ಕ ತಪಾಸಣೆ ನಡೆಸುವಂತೆ ರಾಜ್ಯ ಸರಕಾರವೇ ಆದೇಶಿಸಿತ್ತು. ಈ ಪ್ರಕರಣದಲ್ಲಿ ಪ್ರಾಧ್ಯಾಪಕರು, ಅಧ್ಯಾಪಕರು, ಸಹಾಯಕ ಗ್ರಂಥಾಧಿಕಾರಿಗಳು, ದೈಹಿಕ ಹಾಗೂ ಕ್ರೀಡಾ ತರಬೇತುದಾರರು ಸೇರಿದಂತೆ ಒಟ್ಟು 91 ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವ್ಯವಹಾರ ಪ್ರಕರಣ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಲಾಭ ಪಡೆದಿರುವ ಫಲಾನುಭವಿಗಳಿಂದ ಹೆಚ್ಚುವರಿ ವೇತನ ಭತ್ಯೆ ವಸೂಲು ಮಾಡುವಂತೆ ಸರಕಾರ ವಿವಿಗೆ ಸೂಚಿಸಿದೆ.
1983ರಲ್ಲಿ ಯುಜಿಸಿಯು ‘ಮೆರಿಟ್ ಪ್ರೊಮೋಷನ್ ಸ್ಕೀಂ’ ಜಾರಿಗೆ ತಂದಿತ್ತು. 4 ವರ್ಷದ ಬಳಿಕ ‘ಕೆರಿಯರ್ ಅಡ್ವಾನ್ಸ್ಮೆಂಟ್ ಸ್ಕೀಂ’ ರೂಪಿಸಿತು. ಹೊಸ ಬಡ್ತಿ ಯೋಜನೆ ಬಂದ ನಂತರ ವಿವಿಯಲ್ಲಿ ಹಳೆಯ ವ್ಯವಸ್ಥೆಯನ್ನು ರದ್ದು ಮಾಡಿಲ್ಲ. ಹೊಸ ಯೋಜನೆಯನ್ನು ಆರು ವರ್ಷಗಳ ನಂತರವೂ ಅನ್ವಯಿಸಿಕೊಂಡಿಲ್ಲ. ಬದಲಾಗಿ ವಿವಿಯಲ್ಲಿ ಎರಡೂ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿರುವುದು ವರದಿಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...