ಬರ ಬರ ಬರ : ಬರದ ಬೇಗೆಯ ತಾಳಿಕೊಳ್ಳುವುದೇ ಮರ ?
ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಜ್ಞಾನ- ತಂತ್ರಜ್ಞಾನಗಳು ಒಂದಿಷ್ಟು ಸಹಾಯ ಮಾಡಿಯಾವೇ...?
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಬರ ಪರಿಸ್ಥಿತಿಯನ್ನು ಸಹಿಸಿಕೊಳ್ಳಬಲ್ಲ ಜೀನ್ (ಡಿಎನ್ಎ) ಇರುವ ಗಿಡಗಳನ್ನು ಸೃಷ್ಟಿಸಲು ವಿವಿ ಪ್ರಯತ್ನಿಸುತ್ತಿದೆ. ಮೊನ್ಸಾಂಟೋ ಎಂಬ ಬಹುರಾಷ್ಟ್ರೀಯ ಕಂಪೆನಿ ಈ ಅಧ್ಯಯನವನ್ನು ಪ್ರಾಯೋಜಿಸುತ್ತಿದೆ. ಮರಗಳಲ್ಲಿ ಬರ ಸಹಿಸಿಕೊಳ್ಳುವ ಸಾಮರ್ಥ್ಯ ಇರುವ ಜೀನ್ಸ್ನ್ನು ಪತ್ತೆ ಮಾಡಿ ಇತರ ಗಿಡಗಳಿಗೆ ಅಳವಡಿಸಲಾಗುತ್ತದೆಯೇ ಎನ್ನುವುದನ್ನು ಅಧ್ಯಯನದಿಂದ ಪತ್ತೆ ಮಾಡಲಾಗುತ್ತದೆ. ಈ ಅಧ್ಯಯನಕ್ಕಾಗಿಯೇ ಮೊನ್ಸಾಂಟೋ 40 ಸಾವಿರ ಡಾಲರ್ ಹಣ ತೆಗೆದಿಟ್ಟಿದೆ.
ರಾಜ್ಯದ ಶೇ 63ರಷ್ಟು ಪ್ರದೇಶ ಬರಪೀಡಿತವಾಗಿದೆ. ಆದ್ದರಿಂದ ಬರ ಸಹಿಷ್ಣುತಾ ಸಾಮರ್ಥ್ಯವನ್ನು ಯಾವುದಾದರೂ ಮೂಲಗಳಿಂದ ಹೆಚ್ಚಿಸುವ ಜರೂರತ್ತು ಈಗ ಇದೆ ಎಂದು ಈ ಅಧ್ಯಯನ ಯೋಜನೆಯನ್ನು ನಿರ್ವಹಿಸುತ್ತಿರುವ ಯುಎಎಸ್ನ ಪ್ರೊಫೆಸರ್ ಎಂ. ಉದಯ್ ಕುಮಾರ್ ಹೇಳುತ್ತಾರೆ.
ರಾಜ್ಯ ಕೃಷಿ ವಿಭಾಗದ ಮೂಲಗಳನ್ನು ನಂಬುವುದಾದರೆ, ಬರ ಪೀಡಿತ ರಾಜ್ಯಗಳಲ್ಲಿ ರಾಜಸ್ತಾನದ ನಂತರದ ಸ್ಥಾನ ಕರ್ನಾಟಕಕ್ಕೇ ಸಲ್ಲುತ್ತದೆ. 27 ಜಿಲ್ಲೆಗಳಲ್ಲಿ ಸುಮಾರು 20 ಜಿಲ್ಲೆಗಳಲ್ಲಿ ಸರಾಸರಿ ತೃಪ್ತಿದಾಯಕ ಮಳೆ ಬಿದ್ದಿಲ್ಲ. ಅಧ್ಯಯನ ಕೈಗೆತ್ತಿಕೊಂಡಿರುವ ತಜ್ಞರ ತಂಡವು ರಾಜ್ಯದಲ್ಲಿ ಯಾವ ಮರಕ್ಕೆ ಬರ ಪರಿಸ್ಥಿತಿಯನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದನ್ನು ಮೊದಲು ಪತ್ತೆ ಹಚ್ಚುತ್ತದೆ. ನಂತರ ಆ ಮರದಲ್ಲಿರುವ ಜೀನ್ನ್ನು ತೆಗೆದು ಕ್ಲೋನಿಂಗ್ ಮಾಡುವ ಅಥವಾ ಕಸಿ ಮಾಡುವ ಬಗ್ಗೆ ಯೋಜನೆ ರೂಪಿಸುತ್ತದೆ.
ಈ ಅಧ್ಯಯನದಿಂದ ಗುಣಾತ್ಮಕ ಫಲಿತಾಂಶವೇನಾದರೂ ದೊರಕಿದರೆ, ಅದರಿಂದ ರಾಜ್ಯದ ರೈತರಿಗಷ್ಟೇ ಅಲ್ಲ, ಇಡೀ ದೇಶದ ರೈತರಿಗೆ ಸಹಾಯವಾಗಲಿದೆ ಎಂದು ಮೊನ್ಸಾಂಟೋ ಕಂಪೆನಿಯ ಅಧ್ಯಯನ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ, ಟಿ. ಎಂ. ಮಂಜುನಾಥ್ ಹೇಳುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...