ಬೆಂಗಳೂರಲ್ಲಿ ಆಗರ್ಭ ಶ್ರೀಮಂತ ಅಕ್ಕ ತಮ್ಮನ ನಿಗೂಢ ಕೊಲೆ
ಬೆಂಗಳೂರು: ನಗರದ ಅಲಸೂರಿನ ರಥಬೀದಿಯ ಸಮೀಪ ವಾಸಿಸುತ್ತಿದ್ದ ಇಬ್ಬರು ಆಗರ್ಭ ಶ್ರೀಮಂತರು ನಿಗೂಢ ರೀತಿಯಲ್ಲಿ ಕೊಲೆಯಾಗಿರುವ ದುರ್ಘಟನೆ 15 ದಿನ ತಡವಾಗಿ ಬೆಳಕಿಗೆ ಬಂದಿದೆ.
ರಾಷ್ಟ್ರೀಕೃತ ಬ್ಯಾಂಕೊಂದರ ನಿವೃತ್ತ ಅಧಿಕಾರಿ ರಾಜರತ್ನಂ ರಾಮಕುಮಾರ್(58) ಮತ್ತು ಅವರ ಅಕ್ಕ ಕಸ್ತೂರಿ ಬಾಯಿ (63) ಕೊಲೆಯಾಗಿರುವ ವ್ಯಕ್ತಿಗಳು. ಇಬ್ಬರೂ ಅವಿವಾಹಿತರಾಗಿದ್ದರು. ದುಷ್ಕರ್ಮಿಗಳು ಇಬ್ಬರ ತಲೆಗೂ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಮೃತ ದೇಹಗಳ ಮೇಲೆ ಹಾಸಿಗೆಯನ್ನು ಹೊದಿಸಿ ಪರಾರಿಯಾಗಿದ್ದರು. ಲಕ್ಷಾಂತರ ರೂಪಾಯಿ ನಗ ನಾಣ್ಯವನ್ನು ದೋಚಿರುವ ಸಾಧ್ಯತೆ ಇದೆ. ಇದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದಿರಬಹುದಾದ ಕೊಲೆ ಎಂದು ನಗರ ಪೊಲೀಸ್ ಕಮಿಷನರ್ ಎಚ್. ಟಿ. ಸಾಂಗ್ಲಿಯಾನಾ ತಿಳಿಸಿದ್ದಾರೆ.
ಜುಲೈ 18ರ ನಂತರ ಇವರ ಮನೆಗೆ ಯಾವುದೇ ಪತ್ರಿಕೆಗಳು ಬಂದಿಲ್ಲ. 17ರ ರಾತ್ರಿ ರಾಮಕುಮಾರ್ ಅವರ ಅಣ್ಣ ಶಿವಕುಮಾರ್ ಕನೆಡಾದಿಂದ ಫೋನ್ನಲ್ಲಿ ಮಾತನಾಡಿದ್ದರು. ಅನಂತರ ದಿನಕ್ಕೆ ಹಲವು ಬಾರಿ ಫೋನ್ ಮಾಡಿದರೂ, ಯಾರೂ ಫೋನ್ ಎತ್ತಿಕೊಳ್ಳಲಿಲ್ಲ. ಕೊನೆಗೆ ಸ್ನೇಹಿತರಾದ, ಟರ್ಫ್ ಕ್ಲಬ್ನ ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರಿಗೆ, ಮನೆಯ ಬಳಿಗೆ ಹೋಗಿ ನೋಡಿ ಬರುವಂತೆ ತಿಳಿಸಿದಾಗ ಮನೆಗೆ ಬೀಗ ಹಾಕಿರುವುದು ತಿಳಿದು ಬಂತು.
ಬೇರೆ ದಾರಿ ಕಾಣದೇ ಶಿವಕುಮಾರ್ ಕೆನಡಾದಿಂದ ಬೆಂಗಳೂರಿಗೆ ಆಗಮಿಸಿದಾಗ ಕೊಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಗರ್ಭ ಶ್ರೀಮಂತರಾಗಿದ್ದ ರಾಮಕುಮಾರ್ ಅವರಿಗೆ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಂಗಡಿ, ಮಳಿಗೆ, ಆಸ್ತಿ ಪಾಸ್ತಿಗಳಿದ್ದು, ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು. ಆದರೆ ಅವರು, ನೆರೆಹೊರೆಯವರೊಂದಿಗೂ ಬೆರೆಯುತ್ತಿರಲಿಲ್ಲವಾದ್ದರಿಂದ ಕೊಲೆಯ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಸಾಂಗ್ಲಿಯಾನಾ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...