ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ ರೂಪಿಸಲು ರೆಡಿಯಾದ ಸ್ವಾಗತ ಸಮಿತಿ
ಬೆಳಗಾವಿ: ಮುಂದಿನ ವರ್ಷದ ಜನವರಿ-ಫೆಬ್ರವರಿ ಅವಧಿಯಲ್ಲಿ ನಡೆಯಲಿರುವ 70 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಭಾನುವಾರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ. ಎಸ್. ಕೌಜಲಗಿಯವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಭಾಕರ ಕೋರೆ ಅವರನ್ನು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಮಹಾ ಸ್ವಾಮಿಗಳು ಮತ್ತು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು (ನೇತೃತ್ವ), ಪ್ರವಾಸೋದ್ಯಮ ಖಾತೆ ಸಚಿವ ಡಿ. ಬಿ. ಇನಾಂದಾರ್ (ಗೌರವಾಧ್ಯಕ್ಷ), ಬೆಳಗಾವಿ ಕ್ಷೇತ್ರದ ಸಂಸದ ಅಮರಸಿಂಹ ಪಾಟೀಲ್, ಚಿಕ್ಕೋಡಿ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಮತ್ತು ಸ್ಥಳೀಯ ಶಾಸಕ ರಮೇಶ ಕುಡಚಿ(ಮಹಾಪೋಷಕರು), ಜಿಲ್ಲೆಯ ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮೇಯರ್, ಉಪಮೇಯರ್ (ಪೋಷಕರು), ಡಾ. ಎಸ್. ಎಂ. ಹರದಗಟ್ಟಿ (ಪ್ರಧಾನ ಕಾರ್ಯದರ್ಶಿ).
ಆಯ್ಕೆ ಸಭೆಯಲ್ಲಿ ಕೆಎಲ್ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಅವರು, ಉಳಿದ ಪದಾಧಿಕಾರಿಗಳು ಮತ್ತು ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು , ಸ್ವಾಗತ ಸಮಿತಿಯ ಅಧ್ಯಕ್ಷರೇ ನೇಮಕ ಮಾಡಬೇಕು. ನೇಮಕ ಮಾಡುವಾಗ ಎಲ್ಲರಿಗೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಈ ಮಾತನ್ನು ಸಭೆ ಯಾವುದೇ ತಕರಾರಿಲ್ಲದೇ ಒಪ್ಪಿತು.
70 ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚನೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ಬೆಳಗಾವಿಯ ಕೈ ತಪ್ಪಿ ಹೋಗಬಹುದು ಎಂಬ ಆತಂಕಗಳಿಗೆ ತೆರೆ ಬಿದ್ದಂತಾಗಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...