ಮಹಾರಾಷ್ಟ್ರ ಅಪೆಕ್ಸ್ನಲ್ಲಿ ಗಂಟಿಟ್ಟವರ ನೆರವಿಗೆ ಪೇಜಾವರ ಶ್ರೀ
ಉಡುಪಿ : ಪ್ರಧಾನಿ ಎ.ಬಿ.ವಾಜಪೇಯಿ, ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಅವರನ್ನ್ನು ಮಧ್ಯಸ್ತಿಕೆಗೆ ಕರೆದು, ಜನರ ಠೇವಣಿ ಹಣವನ್ನು ಮಹಾರಾಷ್ಟ್ರ ಅಪೆಕ್ಸ್ ಕಾರ್ಪೊರೇಷನ್ (ಎಂಎಸಿ) ಹಿಂತಿರುಗಿಸುವಂತೆ ಒತ್ತಡ ತರುವುದಾಗಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಇತ್ತೀಚೆಗೆ ಆಯೋಜಿತವಾಗಿದ್ದ ಮಹಾರಾಷ್ಟ್ರ ಅಪೆಕ್ಸ್ ಕಾರ್ಪೊರೇಷನ್ ಠೇವಣಿದಾರರ ಸಂಘದ ಸಭೆಯಲ್ಲಿ ಸ್ವಾಮೀಜಿ ಈ ವಿಷಯ ತಿಳಿಸಿದರು.
ದುಡ್ಡಿಟ್ಟವರಲ್ಲಿ ಸಾಕಷ್ಟು ಬಡವರಿದ್ದಾರೆ. ಬ್ಯಾಂಕೇತರ ಸಂಸ್ಥೆಯ ಪ್ರಮೋಟರ್ಗಳ ಮಾತನ್ನು ನಂಬಿ, ಭವಿಷ್ಯದ ಕನಸನ್ನು ಕಟ್ಟಿಕೊಂಡು ಜನ ಇಲ್ಲಿ ಠೇವಣಿ ಇಟ್ಟಿದ್ದಾರೆ. ಆದರೀಗ ಕಾರ್ಪೊರೇಷನ್ ಹಣ ವಾಪಸ್ಸು ಕೊಡುತ್ತಿಲ್ಲ. ಜನ ಕಂಗಾಲಾಗಿದ್ದಾರೆ. ಏನು ತಪ್ಪು ಆಗಿದೆಯೋ ಅದನ್ನು ಕಾರ್ಪೊರೇಷನ್ ಸರಿಪಡಿಸಿಕೊಂಡು, ಠೇವಣಿದಾರರ ಹಣವನ್ನು ಹಿಂತಿರುಗಿಸಬೇಕು. ಅದಕ್ಕಾಗೇ ಪ್ರಮೋಟರ್ಗಳು ಮತ್ತು ಠೇವಣಿದಾರರ ಸಂಘದ ಮುಖ್ಯಸ್ಥರನ್ನು ಸಭೆ ಸೇರಿಸಿ, ಇದರ ಬಗ್ಗೆ ಒಂದು ಇತ್ಯರ್ಥಕ್ಕೆ ಬರುವಂತೆ ಪ್ರಯತ್ನಿಸಲಾಗುವುದು ಎಂದು ಪೇಜಾವರ ಶ್ರೀ ಠೇವಣಿದಾರರಿಗೆ ಭರವಸೆ ಕೊಟ್ಟರು.
ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗಡೆ ಕೂಡ ಹಣ ಹೂಡಿರುವ ಠೇವಣಿದಾರರ ಬಗ್ಗೆ ಕಳಕಳಿ ಹೊಂದಿದ್ದಾರೆ. ಅವರೊಟ್ಟಿಗೂ ಸಮಸ್ಯೆಯ ನಿವಾರಣೆ ಕುರಿತು ಚರ್ಚಿಸಲಾಗುವುದು ಎಂದು ವಿಶ್ವೇಶ ತೀರ್ಥರು ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...