ಭಾರತಕ್ಕೆ ಚಿನ್ನ ತಂದ ಪುತ್ತೂರಿನ ಸತೀಶ್ ರೈ ಮನೆಯಲ್ಲಿ ಸಂಭ್ರಮ
ಮ್ಯಾಂಚೆಸ್ಟರ್: ಹದಿನೇಳನೇ ಕಾಮನ್ವೆಲ್ತ್ ಕ್ರೀಡಾ ಕೂಟದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಕುತ್ಯಾಡಿ ಸತೀಶ್ ರೈ ಎರಡು ಬಂಗಾರ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
77 ಕೆ. ಜಿ ವಿಭಾಗದ ಕ್ಲೀನ್ ಹಾಗೂ ಜರ್ಕ್ನಲ್ಲಿ ಚಿನ್ನ ಗೆದ್ದ ಸತೀಶ್ ಒಟ್ಟಾರೆ ತೂಕದಲ್ಲಿಯೂ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಸ್ನ್ಯಾಚ್ನಲ್ಲಿ ಕಂಚು ಗೆದ್ದುಕೊಂಡಿದ್ದಾರೆ. ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಸತೀಶ್ ಮನೆಯಲ್ಲೀಗ ಸಂಭ್ರಮ. ತಂದೆ ಚಿಕ್ಕಪ್ಪ ರೈ ಅವರಿಗೆ ಮಗನ ಸಾಧನೆಯನ್ನು ಕಣ್ಣು ತುಂಬ ನೋಡಬೇಕೆಂಬ ಆಸೆಗೆ ಕರೆಂಟು ಮಣ್ಣೆರಚಿತು. ಆದರೆ ಮಗ ಬಂಗಾರ ಗೆದ್ದ ಸಂತಸ ಮನೆ ತುಂಬಿದೆ.
ಪುತ್ತೂರಿನ ಜೈ ಹನುಮಾನ್ ವ್ಯಾಯಾಮ ಶಾಲೆಯ ಮುಖ್ಯಸ್ಥ ದಿವಾಕರ ಶೆಟ್ಟಿ ಅವರು ಹೇಳುವ ಪ್ರಕಾರ ಇದು ನಿರೀಕ್ಷಿತ ಪ್ರಶಸ್ತಿ. ಸತೀಶ್ ಭಾರತಕ್ಕೆ ಚಿನ್ನ ತಂದೇ ತರುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಆ ಸಾಮರ್ಥ್ಯವನ್ನು ನಾನು ಅವರಲ್ಲಿ ಗುರುತಿಸಿದ್ದೆ ಎಂದು ದಿವಾಕರ್ ಹೇಳುತ್ತಾರೆ.
ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಕಾರ್ಯದರ್ಶಿ ಚಂದ್ರಹಾಸ ರೈ ಕೂಡ ಇದು ನಿರೀಕ್ಷಿತ ಗೆಲುವು ಎಂದೇ ಹೇಳುತ್ತಾರೆ. ಒಟ್ಟಿನಲ್ಲಿ ಮನೆಯವರ, ರಾಜ್ಯದ ಹಾಗೂ ದೇಶದ ನಿರೀಕ್ಷೆಯನ್ನು ಸತೀಶ್ ನಿಜವಾಗಿಸಿದ್ದಾರೆ. ಈ ಹಿಂದೆಯೂ ಕಾಮನ್ವೆಲ್ತ್ ಹಾಗೂ ಏಷ್ಯನ್ ಕ್ರೀಡಾ ಕೂಟಗಳಲ್ಲಿ ಸತೀಶ್ ಉತ್ತಮ ಪ್ರದರ್ಶನ ನೀಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...