ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ಮನಸ್ಸು ನಮ್ಮದಲ್ಲ !

By Staff
|
Google Oneindia Kannada News

*ಡಿ. ರಾಮ್‌ರಾಜ್‌

ಸಾವಿನ ಕಿಮ್ಮತ್ತೇನು?!
ಹಳ್ಳಿಗಳಲ್ಲಾದರೆ ಊರಿಗೆ ಊರಲ್ಲೇ ಸೂತಕದ ಕಳೆ. ಯಾರ ಮನೆಯಲ್ಲೂ ತಟ್ಟೆ ಮುಂದೆ ತಣ್ಣಗೆ ಕೂತು ಊಟ ಮಾಡುವವರು ಸಿಗೋದಿಲ್ಲ. ಟೀವಿಯಲ್ಲಿ ಸಿನಿಮಾ ಬರೋದಿಲ್ಲ. ರೇಡಿಯೋದಲ್ಲಿ ಹಾಡು ಗುನುಗೋದಿಲ್ಲ. ಆತನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ತಲೆಗಳನ್ನು ಒಂದೇ ಲೆಕ್ಕದಲ್ಲಿ ಅಂದಾಜು ಮಾಡುವುದು ಅಸಾಧ್ಯ. ಅದರಲ್ಲೂ ದೇಶಕ್ಕಾಗಿ ಪ್ರಾಣ ಕೊಡುವ ಯೋಧ ಹುತಾತ್ಮನಾದರಂತೂ ಬೆಳಗಾವಿಯ ಅಥವಾ ಬೀದರಿನ ಆ ಮೂಲೆಯ ಹಳ್ಳಿಗಳಲ್ಲಿ ಹಳ್ಳತುಂಬುವಷ್ಟು ಕಣ್ಣೀರು. ಕೊಡಗಿನ ವೀರನಾದರಂತೂ, ತಮ್ಮ ಮನೆ ಮಗನ ಕಳಕೊಂಡಷ್ಟೇ ಸಂಕಟ. ಮಗನ ಕುರಿತು ಮುಗಿಲಿನಷ್ಟು ಕನಸು ನೇಯ್ದವರ ಕಾಮನಬಿಲ್ಲು ಛಿದ್ರವಾದಾಗ, ಅದನ್ನು ಮತ್ತೆ ಪೋಣಿಸುವಷ್ಟು ಬಲವಾಗುವ ಸಾಂತ್ವನ.

ಈಗ ಬೆಂಗಳೂರಿಗೆ ಬನ್ನಿ -
ಇಲ್ಲೂ ಒಬ್ಬ ಯೋಧ ಪಾಕ್‌ ಉಗ್ರರ ಗುಂಡಿಗೆ ಎದೆಗೊಟ್ಟು ಜುಲೈ 29ರಂದು ಹುತಾತ್ಮನಾದ. ಹೆಸರು ಕ್ಯಾಪ್ಟನ್‌ ಕೆವಿನ್‌ ಕುಮಾರ್‌. ಬದುಕಿದ್ದಿದ್ದರೆ ಅಕ್ಟೋಬರ್‌ 21ಕ್ಕೆ ಸರಿಯಾಗಿ 28 ವರ್ಷ ತುಂಬುತ್ತಿತ್ತು. ಅಪ್ಪ- ಅಮ್ಮ ಮಗನ ಮದುವೆಯ ಕನಸನ್ನು ಕಣ್ಣ ತುಂಬಾ ತುಂಬಿಕೊಂಡಿದ್ದರು. ಈಗ ಕನಸಿನ ಅಣೆಕಟ್ಟು ಒಡೆದಿದೆ. ಕಂಬನಿ ಧಾರಾಕಾರ. ಅದನ್ನು ಒರೆಸುವ ಬೆಂಗಳೂರಿಗರೆಷ್ಟು?

Bangalorians ignore their own Brave Sonಹೊಸೂರು ರಸ್ತೆಯ ಸೇಂಟ್‌ ಮಾರ್ಕ್ಸ್‌ ಕ್ಯಾಥೆಡ್ರಲ್‌ ಚರ್ಚಿನಲ್ಲಿ ಗುರುವಾರ ಆತನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದ ತಲೆಗಳನ್ನು ಒಂದೇ ಅಳತೆಯಲ್ಲೇ ಎಣಿಸಿಬಿಡಬಹುದಾಗಿತ್ತು. ಮುಖ್ಯಮಂತ್ರಿ ಅಲ್ಲಿರಲಿಲ್ಲ. ಜಾರ್ಜ್‌ ಫರ್ನಾಂಡೀಸೂ ಬಂದಿರಲಿಲ್ಲ. ಕೆವಿನ್‌ ಮನೆಯವರ ಬಡಾವಣೆಯ ಎಲ್ಲಾ ಜನರಂತೂ ಖಂಡಿತ ಅಲ್ಲಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ 9 ಅರೆ ಬೆಟಾಲಿಯನ್‌ ವಿಶೇಷ ಪಡೆಯ ಸೂಪರ್‌ ಕಮಾಂಡೋ ಆಗಿದ್ದ ಕೆವಿನ್‌ ತಂದೆ- ತಾಯಿಗೆ ಸಾಂತ್ವನ ಹೇಳಲು ಅಲ್ಲಿಗೆ ಹೋಗುವ ಮನಸ್ಸು ಮಾಡಿದವರಾದರೂ ಎಷ್ಟು ?

ಮುಂಜಾನೆ ಸುದ್ದಿ ಪತ್ರಿಕೆಯಲ್ಲಿ ‘ಅಯ್ಯೋ ಬೆಂಗಳೂರಿನ ಯೋಧ ಸತ್ತನಂತೆ, ಪಾಪ’ ಎನ್ನುವ ಬೆಂಗಳೂರಿನ ಜನಕ್ಕೆ ಸ್ನಾನ ಮಾಡಿ, ಆಫೀಸಿಗೆ ಹೋಗೋ ಹೊತ್ತಿಗೆ ಯೋಧನ ಹೆಸರೇ ಮರೆತು ಹೋಗಿರುತ್ತದೆ. ತನ್ನ ಹೆಂಡತಿ- ಮಕ್ಕಳು, ಮನೆ, ಕಾರು, ಸದಾ ರಿಂಗಿಸುವ ಮೊಬೈಲು, ಆಫೀಸಿನ ಸರಣಿ ಮೀಟಿಂಗುಗಳು, ಹಾಯ್‌ ಬಾಯ್‌ ಎಂದು ಮಿಂಚಿ ಮಾಯವಾಗುವ ಗೆಳೆಯ/ಗೆಳತಿಯರು... ಕೊನೆಗೆ ಟೀವಿಯಲ್ಲಿನ ಯಾವುದೋ ಅಳುಮುಂಜಿ ಧಾರಾವಾಹಿ ಅಥವಾ ಸಿನಿಮಾ- ಇಷ್ಟಕ್ಕೇ ದಿನ ಮುಗಿದು ಹೋಗುತ್ತದೆ. ಈ ಮಧ್ಯೆ ಕೆವಿನ್‌ನಂಥವರು ದೇಶಕ್ಕಾಗಿ ಗಡಿಯಲ್ಲಿ ನಿಂತು, ಗುಂಡಿನ ಮಳೆಯ ನಡುವೆಯೇ ಕನಸ ಕಾಮನಬಿಲ್ಲು ಕಟ್ಟಿಕೊಂಡಿರುತ್ತಾರೆ. ಅಂಥವರು ಇಲ್ಲವಾದಾಗ, ಅವರ ಕುಟುಂಬಕ್ಕೆ ಒಂದು ‘ಸಾರಿ’ ಹೇಳಿಬರುವಷ್ಟೂ ಪುರುಸೊತ್ತು ನಮ್ಮಲ್ಲಿಲ್ಲ, ಆತನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ಮನಸ್ಸು ನಮ್ಮದಲ್ಲ.

ಮಂತ್ರಿಮಹೋದಯರು ಮಾಡಿದ್ದೇನು?
ಸಮಾಜ ಕಲ್ಯಾಣ ಸಚಿವ ಎ.ಕೃಷ್ಣಪ್ಪ ಜುಲೈ 31ರಂದು ನಗರಕ್ಕೆ ಬಂದ ಕೆವಿನ್‌ ಶವವನ್ನು ಸ್ವೀಕರಿಸಿದರು. ಅದು ಅವರ ಕರ್ತವ್ಯ. ರಾಜ್ಯಪಾಲರಾದ ವಿ.ಎಸ್‌.ರಮಾದೇವಿ ಮಾಧ್ಯಮಗಳಿಗೆ ತಮ್ಮ ಸಂತಾಪ ಸಂದೇಶವನ್ನು ಚಾಚೂ ತಪ್ಪದೆ ಕಳುಹಿಸಿದರು. ಅದು ಅವರ ಸಂಪ್ರದಾಯ, ರುಟೀನು ಎಂದರೂ ಸರಿ. ರಾಜಕಾರಣಿ ಸತ್ತಾಗ, ಅಂತಿಮ ಸಂಸ್ಕಾರಕ್ಕೆ ತಪ್ಪದೆ ಹೋಗುವ ಮಂತ್ರಿ ಮಹೋದಯರಿಗೆ ಕೆವಿನ್‌ ಅಂತಿಮ ಸಂಸ್ಕಾರಕ್ಕೆ ಹೋಗಲು ಪುರುಸೊತ್ತಿಲ್ಲ. ಯಾಕೆಂದರೆ, ಅದು ಕಡ್ಡಾಯ ಅಲ್ಲವೇ ಅಲ್ಲ !

ಬದುಕಿ ಬಾಳಬೇಕಾದ ಕೆವಿನ್‌ ಚಿಕ್ಕ ವಯಸ್ಸಲ್ಲೇ ತೀರಿಕೊಂಡಿದ್ದಕ್ಕೆ ನನಗೆ ದುಃಖವೇನೋ ಆಗಿದೆ. ಹಾಗಂತ ಅಳುತ್ತಾ ಕೂತರೆ ನನ್ನ ಪಥ ಸಾಗಬೇಕಲ್ಲ. ನಾನು ಬೆಳೆದಿರುವ ಸಮಾಜವೇ ಹೀಗಿದೆ. ಪಕ್ಕದ ಮನೆಯ ಮುಚ್ಚಿದ ಕದವಷ್ಟೇ ಕಾಣುತ್ತದೇ ವಿನಃ ಅಲ್ಲಿ ಹೊತ್ತಿ ಉರಿಯುವ ಬೆಂಕಿ ನನಗೆ ಕಾಣೋದಿಲ್ಲ, ಕಾಣೋದು ಬೇಕಾಗೂ ಇಲ್ಲ ಎನ್ನುವ ಬೆಂಗಳೂರಿನ ಎಂಜಿನಿಯರ್‌ ಶಿವಕುಮಾರ್‌ ಬೆಂಗಳೂರಿಗರ ಹೆಮ್ಮೆಯ ಪ್ರತಿನಿಧಿ !

ಎಷ್ಟೋ ಹಳ್ಳಿಗಳಲ್ಲಿ ಇವತ್ತಿಗೂ ಒಬ್ಬ ಯೋಧ ಸತ್ತರೆ, ಇಡೀ ಹಳ್ಳಿಯ ಯಾವ ಮನೆಯಲ್ಲೂ ಒಲೆ ಹಚ್ಚುವುದಿಲ್ಲ. ಬೆಂಗಳೂರಿನ ನಾಜೂಕು ನಾಗರಿಕರಿಗೆ ಕನಿಷ್ಠ ಇದಾದರೂ ಗೊತ್ತಿರಲಿ.

ದಟ್ಸ್‌ಕನ್ನಡ ಡಾಟ್‌ ಕಾಂ ಕೆವಿನ್‌ನ ಆತ್ಮಕ್ಕೆ ಶಾಂತಿ ಕೋರುತ್ತದೆ. ಆತನನ್ನು ಕಳೆದುಕೊಂಡ ತಂದೆ- ತಾಯಿಗೆ ದುಃಖ ಭರಿಸುವ ಚೈತನ್ಯವನ್ನು ಭಗವಂತ ನೀಡಲಿ.

ಮನಸ್ಸು ಕರಗಿತೆ. ಬನ್ನಿ, ಕೆವಿನ್‌ ಮನೆಯವರಿಗೆ ಸಾಂತ್ವನದ ಎರಡು ಮಾತು ಹೇಳಿ-
Ms Christine Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X