ಶಿಕ್ಷಕರತ್ತ ಒಲಿದ ಕೆಎಟಿ ತೀರ್ಪು : ಜುಲೈ 31ರಂದು ಕೌನ್ಸಿಲಿಂಗ್
ಬೆಂಗಳೂರು :ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಮಾದರಿಯಲ್ಲಿ ಭರ್ತಿ ಮಾಡಿಕೊಳ್ಳುವ ಸರಕಾರದ ಯೋಜನೆಯನ್ನು ಕರ್ನಾಟಕ ಆಡಳಿತ ಪ್ರಾಧಿಕಾರ ಬೆಂಬಲಿಸಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಸರಕಾರ ನೇಮಕಾತಿ ನಿಯಮಗಳ ಕುರಿತು ಹೊರಡಿಸಿದ್ದ ಅಧಿಕೃತ ಸೂಚನೆಯನ್ನು ಕೆಎಟಿ ಎತ್ತಿ ಹಿಡಿದಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿಯಮಗಳು ಸಮಂಜಸವಾಗಿವೆ ಎಂದು ಕೆಎಟಿ ತನ್ನ ತೀರ್ಪಿನಲ್ಲಿ ಹೇಳಿದೆ. ಕೆಎಟಿ ನ್ಯಾಯಮೂರ್ತಿ ಬಿ. ಎನ್. ಮಲ್ಲಿಕಾರ್ಜುನ ಹಾಗೂ ಆಡಳಿತ ಸದಸ್ಯ ಪಿ. ನಾಗೇಶ್ವರ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 228 ಅರ್ಜಿಗಳನ್ನು ಕೆಎಟಿ ವಜಾ ಮಾಡಿದೆ.
ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದ ಆಭ್ಯರ್ಥಿಗಳಿಗೆ ಜುಲೈ 31ರ ಬುಧವಾರದಂದು ವಿದ್ಯಾರ್ಹತೆಯ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ನೇಮಕಾತಿಯ ಆದೇಶವೂ ಅಂದೇ ದೊರಕಲಿದೆ.
ಆಯಾ ಜಿಲ್ಲೆಗಳ ಸಾರ್ವಜನಿಕ ಉಪನಿರ್ದೇಶಕರ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಸಂಬಂಧಿಸಿದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಾರೆ. ನಂತರ ಅಂದೇ ಸಂಜೆ ನೇಮಕಾತಿ ಆದೇಶವನ್ನೂ ನೀಡಲಿದ್ದಾರೆ. ಈ ವಿಷಯವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲಾಖೆಗೆ 15, 500 ಮಂದಿ ಶಿಕ್ಷಕರ ಅಗತ್ಯವಿದೆ. ಆದರೆ ಈಗ 11,520 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಯನ್ನು ಸದ್ಯದಲ್ಲೇ ಮತ್ತೆ ಆರಂಭವಾಗಲಿದೆ ಎಂದು ಚಂದ್ರಶೇಖರ್ ತಿಳಿಸಿದರು.
(ಇನ್ಫೋವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...