ಆದಾಯ ತೆರಿಗೆ ಕಚೇರಿ ಸಿಬ್ಬಂದಿ ಮುಷ್ಕರ : ಉದ್ದದ ಕ್ಯೂ ಕರಗುತ್ತಿಲ್ಲ
ಬೆಂಗಳೂರು : ‘ಈ ವಯಸ್ಸಿನಲ್ಲಿ ನಾನು ತೆರಿಗೆ ಕಟ್ಟೋಕೆ ಮೂರನೇ ಮಹಡಿವರೆಗೆ ಮೆಟ್ಟಿಲು ಹತ್ತಬೇಕು. ಸಾಲದ್ದಕ್ಕೆ ಕ್ಯೂ ನೋಡಿದರೆ, ಈ ಜನ್ಮದಲ್ಲಿ ಕರಗುತ್ತೆ ಅನ್ನಿಸಲ್ಲ !’
ಸೋಮವಾರ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಪಿಂಚಣಿದಾರರೊಬ್ಬರು ಅಳಲು ತೋಡಿಕೊಂಡ ಪರಿಯಿದು. ಈ ಕಚೇರಿಯ ಸಿಬ್ಬಂದಿ ಹಠಾತ್ ಮುಷ್ಕರ ಹೂಡಿದ್ದು, ತೆರಿಗೆ ಕಟ್ಟುವ ಗಡುವು (ಜುಲೈ 31) ಇನ್ನೆರಡೇ ದಿನ ಇರುವುದರಿಂದ ನಾಗರಿಕರಿಗೆ ಯದ್ವಾತದ್ವಾ ತೊಂದರೆಯಾಗಿದೆ. ಸಿಬ್ಬಂದಿ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟು, ಜುಲೈ 31ರಂದು ಮುಷ್ಕರ ಹೂಡುವುದಾಗಿ ಈ ಹಿಂದೆ ಹೇಳಿದ್ದರು. ಆದರೀಗ ನಿರ್ಧಾರ ಬದಲಿಸಿ ದಿಢೀರ್ ಸಂಪು ಹೂಡಿದ್ದಾರೆ.
ಆದಾಯ ತೆರಿಗೆ ಕಟ್ಟಿಸಿಕೊಳ್ಳಲು ಜುಲೈ 31 ಕೊನೆ ದಿನ. ಒಂದು ವೇಳೆ ಅಂದು ಸಿಬ್ಬಂದಿ ಮುಷ್ಕರ ನಿರತರಾದಲ್ಲಿ ಹಣ ಕಟ್ಟಿಸಿಕೊಳ್ಳಲು ಬದಲಿ ವ್ಯವಸ್ಥೆ ರೂಪಿಸುವ ಕುರಿತು ಸರ್ಕಾರ ಚಿಂತಿಸುತ್ತಿತ್ತು. ಆದರೆ ಹಠಾತ್ ಮುಷ್ಕರ ಇಡೀ ವ್ಯವಸ್ಥೆಯನ್ನೇ ಹಾಳು ಗೆಡವಿದೆ. ತೆರಿಗೆ ವಸೂಲು ಮಾಡಲು ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಕಟ್ಟಡದಲ್ಲಿ ವಿಶೇಷ ಕೌಂಟರುಗಳನ್ನು ತೆರೆಯುವ ನಿರ್ಧಾರವನ್ನೂ ಸರ್ಕಾರ ಕೈಬಿಟ್ಟಿದೆ.
ಸೋಮವಾರದ
ತೆರಿಗೆ
ಹೈಲೈಟ್ಸ್-
- ತೆರಿಗೆ ಕಟ್ಟುವ ಸಾಲಿನಲ್ಲಿ ನಿಂತಿರುವ ಮಂದಿ ಸುಮಾರು 5 ಸಾವಿರ. ಆದರೆ ಪ್ರತಿ ದಿನ ಅಬ್ಬಬ್ಬಾ ಅಂದರೆ 200 ಜನರಿಂದ ಮಾತ್ರ ತೆರಿಗೆ ಕಟ್ಟಿಸಿಕೊಳ್ಳುವುದು ಸಾಧ್ಯ. ಈಗ ಮುಷ್ಕರವಾದ್ದರಿಂದ ಕ್ಯೂ ಕರಗುವ ಸಾಧ್ಯತೆ ಇಲ್ಲ.
- ವಯೋವೃದ್ಧರಿಗೆ, ಪಿಂಚಣಿದಾರರಿಗೆ ಸರಿಯಾದ ಮಾರ್ಗ ತೋರುವವರಾರೂ ಕಚೇರಿಯಲ್ಲಿಲ್ಲ. ಬಿಡುವಿಲ್ಲದ ಕೆಲಸದ ಭರಾಟೆಯಲ್ಲಿರುವ ಕಾರ್ಪೊರೇಟ್ ಉದ್ದಿಮೆದಾರರಿಗೆ ಅಷ್ಟುದ್ದ ಕ್ಯೂನಲ್ಲಿ ನಿಲ್ಲುವ ವ್ಯವಧಾನವಿಲ್ಲ.
- ಇಷ್ಟೆಲ್ಲಾ ಅವ್ಯವಸ್ಥೆಯಿದ್ದರೂ ತೆರಿಗೆ ಕಟ್ಟಿಸಿಕೊಳ್ಳುವ ಕೊನೆ ದಿನಾಂಕವನ್ನು ಸರ್ಕಾರ ವಿಸ್ತರಿಸಿಲ್ಲ.
(ಇನ್ಫೋ ವಾರ್ತೆ)
ಇದನ್ನೂ
ಓದಿ-
ಮುಖಪುಟ
/
ಇವತ್ತು...
ಈ
ಹೊತ್ತು...