ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಟ್ಕಾ ನಿಷೇಧಿಸಿ ಸಾಧಿಸುವುದೇನು ಮಣ್ಣಂಗಟ್ಟಿ ?-ಸ್ವಾಮೀಜಿ ಪ್ರಶ್ನೆ
ಶಿವಮೊಗ್ಗ : ಅಡಿಕೆ ಬೆಳೆಗಾರರ ಹಿತ ರಕ್ಷಣೆಯ ಕಡೆಗೆ ಹೆಚ್ಚು ಗಮನಹರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಗುಟ್ಕಾ ನಿಷೇಧವನ್ನು ವಿರೋಧಿಸಿದ್ದಾರೆ. ಹಾಗೆಂದು ರಾಮಚಂದ್ರಾಪುರ ಮಠ ದುರ್ವ್ಯಸವನ್ನು ಬೆಂಬಲಿಸುತ್ತದೆ ಎಂದೇನಲ್ಲ. ಗುಟ್ಕಾಕ್ಕಿಂತ ಹಾನಿಕರವಾದ ಇತರ ಮಾದಕ ಪದಾರ್ಥಗಳು ಚಾಲ್ತಿಯಲ್ಲಿರುವಾಗ ಗುಟ್ಕಾದ ಮೇಲೇಕೆ ಸರಕಾರದ ಸಿಟ್ಟು ಎಂಬುದು ರಾಘವೇಶ್ವರ ಸ್ವಾಮೀಜಿಗಳ ಪ್ರಶ್ನೆ.
ಅಡಿಕೆ ಬೆಳೆಗಾರರಿಗೆ ಆಗುವ ಅನ್ಯಾಯವನ್ನು ಎಳ್ಳಷ್ಟು ಸಹಿಸದ ಸ್ವಾಮೀಜಿಗಳು ಶನಿವಾರ ಮಠದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು. ಮಾತೆಲ್ಲವೂ ಅಡಿಕೆಯ ಸುತ್ತವೇ ಇದ್ದುದರಿಂದ ಮಾರುಕಟ್ಟೆ, ದರ ಕುಸಿತ, ವಿಸ್ತರಿಸುತ್ತಿರುವ ಅಡಿಕೆ ತೋಟಗಳ ವಿಷಯ ಪ್ರಸ್ತಾಪವಾಯಿತು.
ಅಡಿಕೆ
ಮಾರಕಟ್ಟೆಗೆ
ಪೂರಕವಾಗಿ
ಸ್ವಾಮೀಜಿ
ಆಡಿದ
ಮಾತುಗಳ
ಮುಖ್ಯಾಂಶಗಳು
:
- ಗುಟ್ಕಾ ನಿಷೇಧಿಸಿದರೆ ಜನ ಸಿಗರೇಟಿನ ಮೊರೆ ಹೋಗುತ್ತಾರೆ. ಗುಟ್ಕಾಕ್ಕಿಂತ ಸಿಗರೇಟಿನಲ್ಲಿಯೇ ಹೆಚ್ಚು ಹಾನಿಕಾರಕ ಅಂಶವಿರುವುದು.
- ಗುಟ್ಕಾದಲ್ಲಿ ಶೇ 90ರಷ್ಟು ಅಡಿಕೆಯ ಅಂಶವಿರುತ್ತದೆ. ಮಾದಕ ಅಂಶ ತುಂಬಾ ಕಡಿಮೆಯಾಗಿರುವುದರಿಂದ ಗುಟ್ಕಾವನ್ನು ನಿಷೇಧಿಸುವುದರಲ್ಲಿ ಅರ್ಥವಿಲ್ಲ.
- ಗುಟ್ಕಾ ನಿಷೇಧಿಸುವ ಮೂಲಕ ಸರಕಾರ ಗುಟ್ಕಾ ವ್ಯಸನ ಮುಕ್ತ ಸಮಾಜ ನಿರ್ಮಿಸಬಹುದೇ ಹೊರತು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವುದು ಸಾಧ್ಯವಾಗದು.
- ಸಿಗರೇಟು ಸೇದುವುದರಿಂದ ಸೇದುವಾತನಷ್ಟೇ ಅಲ್ಲ, ಅಕ್ಕ ಪಕ್ಕದವರ ಆರೋಗ್ಯಕ್ಕೂ ಹಾನಿಯಾಗುತ್ತದೆ. ಆದರೆ ಗುಟ್ಕಾ ಹಾಗಲ್ಲ.
- ಗುಟ್ಕಾ ನಿಷೇಧದಿಂದ ಸಿಗರೇಟು ತಯಾರಿಕಾ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭವಾಗುತ್ತದೆ. ಅಡಿಕೆ ಬೆಳೆಯುವ ಲಕ್ಷಾಂತರ ಬಡ ಕುಟುಂಬಗಳು ಬೀದಿಪಾಲಾಗುತ್ತವೆ.
- ನಿಷೇಧ ವಿಧಿಸುವಾಗ ಒಂದೇ ರೀತಿಯ ಮಾನದಂಡ ಉಪಯೋಗಿಸಬೇಕು. ಗುಟ್ಕಾಕ್ಕೊಂದು ಕಾಯ್ದೆ, ಸಿಗರೇಟಿಗೊಂದು ಕಾಯ್ದೆ ಇರಬಾರದು.
- ರೈತರೂ ಅಡಿಕೆಗೆ ಬೆಲೆ ಬಂದಿದೆ ಎಂದುಕೊಂಡು ಅಡಿಕೆ ಬೆಳೆ ವಿಸ್ತರಣೆ ಮಾಡಬಾರದು. ಅಡಿಕೆಯ ಬಳಕೆಗೆ ಪರ್ಯಾಯ ರೂಪಿಸಬೇಕು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Sunday, July 28, 2002, 5:30 [IST]