ತುಂಗಭದ್ರಾಉಳಿಸಿ ಒಕ್ಕೂಟದಿಂದ ಕರಾಳ ದಿನವಾಗಿ ಸ್ವಾತಂತ್ರ್ಯದಿನ
ಶಿವಮೊಗ್ಗ : ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಲು ಸರಕಾರ ಅವಕಾಶ ನೀಡುತ್ತಿರುವುದನ್ನು ಪ್ರತಿಭಟಿಸಿದ ತುಂಗಾ ನದಿ ಪಾತ್ರದ ಎಂಟು ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ ನಿರ್ಧರಿಸಿದೆ.
ತುಂಗಭದ್ರಾ ಉಳಿಸಿ ಒಕ್ಕೂಟದ ಅಧ್ಯಕ್ಷ ಕಲ್ಕುಳ್ಳಿ ವಿಠ್ಠಲ ಹೆಗ್ಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಂಗಳವಾರ ನಡೆದ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಣಿಗಾರಿಕೆಯ ವಿಷಯ ತಮ್ಮ ಕೈಲಿಲ್ಲ ಎಂಬಂತೆ ವರ್ತಿಸುತ್ತಿವೆ. ಕುದುರೆಮುಖ ಇರುವ ಪ್ರದೇಶ ರಾಜ್ಯ ಸರಕಾರಕ್ಕೆ ಸೇರಿದ್ದು, ಸರಕಾರ ಇನ್ನಾದರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ವಿಠ್ಠಲ್ ಅಭಿಪ್ರಾಯಪಟ್ಟರು.
ಆಗಸ್ಟ್ 15 ರಂದು ಎಂಟೂ ಜಿಲ್ಲೆಗಳಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು. ಅಲ್ಲದೆ ಆಗಸ್ಟ್ 15ರೊಳಗೆ ಕುದುರೆಮುಖ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅವರೂ ಹೋರಾಟದಲ್ಲಿ ಭಾಗಿಯಾಗಬೇಕು. ಆಗಸ್ಟ್ 15ರೊಳಗೆ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸದೇ ಇದ್ದರೆ ಎಂಟು ಜಿಲ್ಲೆಗಳ ಎಲ್ಲ ಜನಪ್ರತಿನಿಧಿಗಳನ್ನು ಬಹಿಷ್ಕರಿಸಲಾಗುವುದು ಎಂದು ಅವರು ಎಚ್ಚರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...