ಆರ್ಟಿಪಿಎಸ್ಗೆ ಏನು ರೋಗ? ಕಾರಣ ಕಂಡು ಹಿಡಿಯೋದ್ಯಾವಾಗ ?
ಬೆಂಗಳೂರು : ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್ಟಿಪಿಸ್)ದ ಘಟಕಗಳು ಪದೇಪದೇ ಕಿರಿಕ್ಕು ಮಾಡುತ್ತಿರುವುದೇಕೆ? ಯಾವುದಾದರೊಂದು ಘಟಕ ರೋಗಗ್ರಸ್ತ ಆಗಿರುವುದೇಕೆ? ಅದೇನು ವಾಸ್ತು ಮಹಿಮೆಯಾ? ಅಥವಾ ದೆವ್ವಗಳ ಕಿತಾಪತಿಯಾ?
ಆರ್ಟಿಪಿಸ್ನ ಸಮಗ್ರ ಅಧ್ವಾನಗಳಿಗೆ ಕಾರಣ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರ ತನಿಖೆ ನಡೆಸುವ ಕುರಿತು ಯೋಚಿಸುತ್ತಿದೆ. ಆರ್ಟಿಪಿಸ್ನಲ್ಲಿ ಪದೇ ಪದೇ ಗ್ರಿಡ್ ವಿಫಲವಾಗುತ್ತಿರುವ ಕುರಿತು ತನಿಖೆ ನಡೆಸುವ ಜವಾಬ್ದಾರಿಯನ್ನು ಸ್ವತಂತ್ರ ಸಮಿತಿಗೆ ವಹಿಸಿಕೊಡಲು ಸರ್ಕಾರ ಯೋಚಿಸುತ್ತಿರುವ ವಿಷಯವನ್ನು ಇಂಧನ ಸಚಿವ ಬಜವರಾಜ ಪಾಟೀಲ್ ಹುಮ್ನಾಬಾದ್ ಜುಲೈ 24 ರ ಬುಧವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಸರ್ಕಾರದ ಮುಂದೆ ಕೆಲವು ಪ್ರಸ್ತಾಪಗಳಿವೆ. ಆ ಪ್ರಸ್ತಾಪಗಳಲ್ಲಿ - ಆರ್ಟಿಪಿಎಸ್ ಮೊದಲ 5 ಘಟಕಗಳ ತೊಂದರೆ ಕುರಿತು ಚರ್ಚಿಸಲು ಕರ್ನಾಟಕ ವಿದ್ಯುತ್ ನಿಗಮ ಹಾಗೂ ಶಾಸಕರ ಸಭೆ ಕರೆಯುವುದು. ಹಾಗೂ ಆರ್ಟಿಪಿಎಸ್ನ 8 ಘಟಕ ಬರುವ ಡಿಸೆಂಬರ್ನಲ್ಲಿ ಕಾರ್ಯಾರಂಭ ಮಾಡುವ ಮುನ್ನ ವಿರೋಧ ಪಕ್ಷಗಳ ಹಾಗೂ ತಜ್ಞರ ಒಪೀನಿಯನ್ ಪಡೆಯುವುದು- ಸೇರಿವೆ ಎಂದು ಸಚಿವ ಹುಮ್ನಾಬಾದ್ ತಿಳಿಸಿದರು.
ಅಂದಹಾಗೆ- ಆರ್ಟಿಪಿಸ್ ಬಾಲಗ್ರಹ ಪೀಡೆಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದು , ಜಾತ್ಯತೀತ ಜನತಾದಳದ ಬಸವರಾಜ ಬೊಮ್ಮಾಯಿ, ಸಂಯುಕ್ತ ಜನತಾದಳದ ಎಂ.ಪಿ.ಪ್ರಕಾಶ್ ಹಾಗೂ ಬಿಜೆಪಿಯ ಎಂ.ಆರ್.ತಂಗಾ.
ಆರ್ಟಿಪಿಸ್ ನಿರ್ವಹಣೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಂಗಾ, ಸ್ಥಾವರದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವಂತೆ ಏರುದನಿಯಲ್ಲಿ ಹೇಳಿದರು. ವೈಫಲ್ಯದ ಕುರಿತು ತನಿಖೆ ನಡೆಸುವಂತೆಯೂ ತಂಗಾ ಒತ್ತಾಯಿಸಿದರು. ಆರ್ಟಿಪಿಎಸ್ನ ಬಹುತೇಕ ಇಂಜಿನಿಯರ್ಗಳು ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ. 2000-2001 ನೇ ಇಸವಿಯಲ್ಲಿ ಸ್ಥಾವರದ ವಿವಿಧ ಘಟಕಗಳು 104 ಬಾರಿ ವಿಫಲವಾಗಿದ್ದು , ಒಟ್ಟು 2320 ತಾಸುಗಳ ಕಾಲ ಕಾರ್ಯ ಸ್ಥಗಿತಗೊಂಡಿದೆ ಎಂದು ತಂಗಾ ಅಂಕಿಅಂಶಗಳ ಸಮೇತ ತಮ್ಮ ವಾದವನ್ನು ಮಂಡಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...