ಧರ್ಮಗ್ರಂಥದಲ್ಲಿರುವ ಕೆಡುಕುಗಳ ತೆಗೆದು ಹಾಕೋಣ -ವಿಹೆಚ್ಪಿ
ನವದೆಹಲಿ: ಹಿಂದೂ ಹಾಗೂ ಮುಸ್ಲಿಂ ಧರ್ಮದ ಗ್ರಂಥಗಳಲ್ಲಿರುವ ದ್ವೇಷಬೋಧಕ ಅಂಶಗಳನ್ನು ಕಿತ್ತು ಒಗೆಯಲು ಹಾಗೂ ಈ ಕುರಿತ ಸಮಗ್ರ ಚರ್ಚೆಗೆ ಬರುವಂತೆ ವಿಶ್ವ ಹಿಂದೂ ಪರಿಷತ್ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಿದೆ.
ಎರಡೂ ಧರ್ಮಗ್ರಂಥಗಳನ್ನು ಎದುರಿಗಿಟ್ಟುಕೊಂಡು, ಪರಸ್ಪರರ ಮೇಲೆ ದ್ವೇಷ ಕಾರಲು ಪ್ರಚೋದಿಸುವ ಅಂಶಗಳನ್ನು ಎರಡೂ ಗ್ರಂಥಗಳಿಂದ ಕಿತ್ತು ಹಾಕೋಣ. ಆಗ ಹಿಂದೂ ಮುಸ್ಲಿಮರ ಮಧ್ಯೆ ಶಾಶ್ವತ ಶಾಂತಿ ನೆಲೆಸುತ್ತದೆ ಎಂದು ವಿಶ್ವಹಿಂದೂ ಪರಿಷತ್ನ ಹಿರಿಯ ಉಪಾಧ್ಯಕ್ಷ ಗಿರಿರಾಜ ಕಿಶೋರ್ ಕರೆ ನೀಡಿದ್ದಾರೆ.
ಹಿಂದೂ ಧರ್ಮ ಹಾಗೂ ಮುಸ್ಲಿಂ ಮತದ ನಡುವೆ ಇರುವ ಕಲಹಗಳಿಗೆ ಬೀಜವಾಗಿರುವ ಅಂಶಗಳನ್ನು ಕಿತ್ತು ಹಾಕಿದರೆ ಮಾತ್ರ ಸದ್ಭಾವನೆ ಸಾಧ್ಯ. ಬದಲಾಗಿ ಯಾತ್ರೆಗಳು, ಚಳವಳಿಗಳಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಗಿರಿರಾಜ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷತ್ ನೀಡಿರುವ ಈ ಕರೆಯ ಹಿನ್ನೆಲೆಯಲ್ಲಿ ಮುಸ್ಲಿಮರು ಬಳಸುತ್ತಿರುವ ಜಿಹಾದ್, ಕಾಫಿರ್ ಮತ್ತು ಕಫ್ರ್ ಪದಗಳ ಅರ್ಥವನ್ನು ಪುನರ್ ವಿಮರ್ಶೆ ಮಾಡಬೇಕೆಂಬ ಹಳೆಯ ಬೇಡಿಕೆ ಮತ್ತೆ ಜೀವ ಪಡೆದಂತಾಗಿದೆ. ಅಲ್ಲದೆ ಅಯೋಧ್ಯೆ ವಿವಾದ ಪರಿಹಾರಕ್ಕೆ ಕಂಚಿ ಶ್ರೀಗಳು ಕೈಗೊಂಡಿರುವ ಪ್ರಯತ್ನಗಳಿಗೂ ವಿಶ್ವಹಿಂದೂ ಪರಿಷತ್ಗೂ ಯಾವುದೇ ಸಂಬಂಧವಿಲ್ಲ ಎಂದು ಇದೇ ಸಂದರ್ಭದಲ್ಲಿ ಗಿರಿರಾಜ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...