ಶಾಸಕರನ್ನು ಲೋಕಾಯುಕ್ತ ವ್ಯಾಪ್ತಿಗೆ ತರಲು ಸರ್ಕಾರ ಸಿದ್ಧ -ಕೃಷ್ಣ
ಬೆಂಗಳೂರು : ಜನ ಪ್ರತಿನಿಧಿಗಳಾದ ಶಾಸಕರನ್ನು ಕೂಡ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಗಳವಾರ (ಜು.23) ವಿಧಾನಸಭೆಯಲ್ಲಿ ಪ್ರಕಟಿಸಿದರು.
ಮುಖ್ಯಮಂತ್ರಿಯೂ ಸೇರಿದಂತೆ ಪ್ರಸ್ತುತ ಸಾರ್ವಜನಿಕ ಸೇವಕರ ಯಾದಿಯಲ್ಲಿರುವ ಶಾಸಕರನ್ನು ಲೋಕಾಯುಕ್ತದಡಿ ತರಲು ಸರ್ಕಾರಕ್ಕೆ ಯಾವುದೇ ಹಿಂಜರಿಕೆಯಿಲ್ಲ ಎಂದು ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಪ್ರಶ್ನೆಗೆ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸುತ್ತಿದ್ದ ಕೃಷ್ಣ ಹೇಳಿದರು.
ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಲೋಕಾಯುಕ್ತವನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ನೇಮಿಸಿದ್ದ ಕ್ಯಾಬಿನೆಟ್ ಉಪ ಸಮಿತಿಯ ವರದಿ ಅಂತಿಮರೂಪಕ್ಕೆ ಬಂದಿದ್ದು , ಅನುಮೋದನೆಗಾಗಿ ಮುಂದಿನ ವಾರ ಸಂಪುಟ ಸಭೆಯ ಮುಂದೆ ಬರುವ ನಿರೀಕ್ಷೆಯಿದೆ ಎಂದು ಕೃಷ್ಣ ತಿಳಿಸಿದರು.
ಸರ್ಕಾರದ ನೂತನ ಟ್ರಾನ್ಸ್ಫರ್ ನೀತಿ ವಿಶ್ವಬ್ಯಾಂಕ್ ಒತ್ತಡದಲ್ಲಿ ರೂಪುಗೊಂಡಿದೆ ಎನ್ನುವ ಸಂಯುಕ್ತ ಜನತಾದಳದ ಪಿಜಿಆರ್ ಸಿಂಧ್ಯಾ ಅವರ ಆರೋಪವನ್ನು ತಳ್ಳಿಹಾಕಿದ ಕೃಷ್ಣ - ಸರ್ಕಾರ ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಕಾಪಾಡಿಕೊಂಡಿದೆ ಎಂದರು. ಈ ಮುಂಚಿನ ಯಾವ ಸರ್ಕಾರವೂ ವರ್ಗಾವಣೆ ನೀತಿಯನ್ನು ಹೊಂದಿರಲಿಲ್ಲ . ಮೊದಲ ಬಾರಿಗೆ ವರ್ಗಾವಣೆ ನೀತಿಯನ್ನು ಹೊಂದಿದ ಕೀರ್ತಿ ತಮ್ಮ ಸರ್ಕಾರದ್ದು ಎಂದು ಹೇಳಿಕೊಂಡ ಕೃಷ್ಣ ಭ್ರಷ್ಟಾಚಾರವನ್ನು ಬೇರು ಸಮೇತ ಹತ್ತಿಕ್ಕಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಛರಿಸಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ