ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಡಿಕೆಸಿ-ಕಾಶಪ್ಪನವರ್ ಪ್ರಕರಣ
ಬೆಂಗಳೂರು : ಮಾಜಿ ಸಚಿವ ಎಸ್.ಆರ್.ಕಾಶಪ್ಪನವರಿಗೆ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಜೀವ ಬೆದರಿಕೆ ಒಡ್ಡಿದ್ದಾರೆನ್ನುವ ವಿವಾದ ವಿಧಾನಸಭೆಯಲ್ಲಿ ಸೋಮವಾರ ಕೋಲಾಹಲಕ್ಕೆ ಕಾರಣವಾಯಿತು.
ಕಾಶಪ್ಪನವರ್ ಅವರ ಜೀವ ಬೆದರಿಕೆ ಆರೋಪ ಪ್ರಕರಣದ ಚರ್ಚೆಗೆ ಅನುಮತಿ ನೀಡುವಂತೆ ಪ್ರತಿಪಕ್ಷಗಳ ನಾಯಕರು ಪಟ್ಟು ಹಿಡಿದು ಕೂತಾಗ ಸದನದಲ್ಲಿ ಅಲ್ಲಕಲ್ಲೋಲ. ಸಂಯುಕ್ತ ಜನತಾದಳದ ಪಿಜಿಆರ್ ಸಿಂಧ್ಯಾ, ಬಿಜೆಪಿಯ ಜಗದೀಶ್ ಶೆಟ್ಟರ್ ಅವರು ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಕೋಲಾಹಲಕ್ಕೆ ನಾಂದಿ ಹಾಡಿದರು. ಸದನದ ಸದಸ್ಯ ಹಾಗೂ ಮಾಜಿ ಸಚಿವರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಆರೋಪಿಸಿದರು.
ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ ಪ್ರತಿಪಕ್ಷಗಳ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು- ಸದನದ ಅಮೂಲ್ಯ ಸಮಯವನ್ನು ಪ್ರತಿಪಕ್ಷಗಳ ಸದಸ್ಯರು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಸ್ಥಿತಿ ಪ್ರಕೋಪಕ್ಕೆ ತಿರುಗಿದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ - ಸರ್ಕಾರ ತನ್ನ ಜವಾಬ್ದಾರಿಯಿಂದ ಯಾವ್ತತೂ ವಿಮುಖವಾಗುವುದಿಲ್ಲ . ನಾಗರಿಕರಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ. ಅದೇ ರೀತಿ ಕಾಶಪ್ಪನವರ್ ಅವರನ್ನೂ ಎಂದರು. ಕಾಶಪ್ಪನವರ್ ಹಾಗೂ ಶಿವಕುಮಾರ್ ತಮ್ಮ ಹೇಳಿಕೆಗಳನ್ನು ಸಭಾಪತಿ ಎಂ.ವಿ.ವೆಂಕಟಪ್ಪ ಅವರಿಗೆ ನೀಡಿದ್ದಾರೆ. ಸಭಾಪತಿ ಪ್ರಕರಣದ ಬಗ್ಗೆ ತೀರ್ಮಾನ ಕೈಗೊಳ್ಳುವರು ಎಂದು ಕೃಷ್ಣ ಹೇಳಿದರು.
ಚರ್ಚೆ ನಡೆಸಲು ಅವಕಾಶ ನೀಡದ ಸಭಾಪತಿಗಳ ತೀರ್ಮಾನವನ್ನು ಪ್ರತಿಭಟಿಸಿ ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...