ಕಬಿನಿಯಿಂದ ರಾಜ್ಯದ ರೈತರಿಗೆ ನೀರು: ಜು.20ರಂದು ನಿರ್ಧಾರ
ಬೆಂಗಳೂರು: ಕಬಿನಿ ಜಲಾಶಯದ ಬಲದಂಡೆ ಕಾಲುವೆಯಿಂದ ರಾಜ್ಯದ ರೈತರಿಗೆ ಕಾವೇರಿ ನೀರು ಬಿಡುವ ಬಗ್ಗೆ ಜುಲೈ 20ರಂದು ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳಲಿದೆ.
ಕಬಿನಿ ಜಲಾಶಯವು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹವನ್ನು ತಪ್ಪಿಸಲು ಹತ್ತು ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂಬುದನ್ನು ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಸರಕಾರ ಒಪ್ಪಿಕೊಂಡಿದೆ. ಪ್ರಸ್ತುತ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ.
ಸರ್ವ ಪಕ್ಷ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಈ ವಿಷಯ ತಿಳಿಸಿದರು. ಉಳ್ಳಳ್ಳಿ ನಾಲೆ ಆಧುನೀಕರಣದ ಕಾಮಗಾರಿಗಳು ಮುಂದುವರೆದಿರುವುದರಿಂದ ರಾಜ್ಯದ ರೈತರಿಗೆ ನೀರು ಬಿಡಲು ಸಾಧ್ಯವಾಗಿಲ್ಲ. ತಮಿಳುನಾಡಿಗೆ ನೀರು ಹರಿದುಹೋಗಿದ್ದರೂ ರಾಜ್ಯದ ರೈತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಪಾಟೀಲ್ಸಮಜಾಯಿಷಿ ನೀಡಿದರು.
ನೀರು ಹರಿವಿನ ಬಗ್ಗೆ ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಸರಕಾರ ಕೈಗೊಂಡ ತೀರ್ಮಾನಗಳನ್ನು ಪ್ರತಿ ಪಕ್ಷಗಳು ಒಪ್ಪಿಕೊಂಡಿವೆ ಎಂದು ಪಾಟೀಲ್ ಹೇಳಿದರು.
ಆದರೆ ತಮಿಳುನಾಡಿಗೆ ನೀರು ಬಿಡುವ ಬದಲು ನದಿಪಾತ್ರದಲ್ಲಿರುವ ರಾಜ್ಯದ ರೈತರಿಗೇ ನೀರು ಒದಗಿಸಬಹುದಿತ್ತು ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ಪ್ರತಿಕ್ರಿಯಿಸಿದ್ದಾರೆ. ಕಬಿನಿಯಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರೆ ಅದು ಮೊದಲು ರಾಜ್ಯದ ರೈತರಿಗೇ ಸಲ್ಲಬೇಕು ಎಂಬುದು ಶೆಟ್ಟರ್ ಅಭಿಪ್ರಾಯ. ಸರ್ವ ಪಕ್ಷ ಸಭೆಯಲ್ಲಿ ತಮಿಳುನಾಡು ಎತ್ತಿರುವ ಕಾನೂನು ವಿವಾದಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಲಿಲ್ಲ. ರಾಜ್ಯದ ನಾಲ್ಕು ಜಲಾಶಯಗಳ ಸ್ಥಿತಿಯ ಪರಾಮರ್ಶೆ ನಡೆಸಬೇಕೆಂಬ ವಿಷಯವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...