ಅಕ್ಟೋಬರ್ 20ರಿಂದ ಭಜರಂಗ ದಳದ ದತ್ತಮಾಲೆ ಅಭಿಯಾನ
ಚಿಕ್ಕಮಗಳೂರು: ಬಾಬಾಬುಡನ್ಗಿರಿ ದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತಜಯಂತಿಗೆ ಪೂರಕವಾಗಿ ದತ್ತಮಾಲೆ ಅಭಿಯಾನ ಅಕ್ಟೋಬರ್ 20ರಿಂದ ಆರಂಭವಾಗಲಿದೆ.
ಏಳು ದಿನಗಳ ಕಾಲ ನಡೆಯುವ ಈ ದತ್ತ ಅಭಿಯಾನದಲ್ಲಿ ರಾಜ್ಯಾದ್ಯಂತದಿಂದ ಆಗಮಿಸುವ ಸಾವಿರಾರು ಮಂದಿ ಭಕ್ತರು ಆಗಮಿಸಲಿದ್ದಾರೆ ಎಂದು ಭಜರಂಗದಳದ ರಾಜ್ಯ ಸಹ ಸಂಚಾಲಕ ಸುನೀಲ್ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸೆಪ್ಟೆಂಬರ್ 15ರಿಂದ ಒಂದು ತಿಂಗಳ ಕಾಲ ಇಸ್ಲಾಂ ಜಿಹಾದ್ ಕುರಿತು ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿದೆ. ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ಅಧಿಕವಾಗಿದೆ ಎಂದು ಆಪಾದಿಸಿದ ಸುನೀಲ್, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಯಾಂತ್ರೀಕೃತ ಕಸಾಯಿಖಾನೆಗಳನ್ನು ನಿರ್ಮಿಸುವ ಸರಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.
ಕಳೆದ 15 ವರ್ಷಗಳಿಂದ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಲಾಗುತ್ತಿದೆ. ಆದರೆ ಸರಕಾರ ಈ ನಿಟ್ಟಿನಲ್ಲಿ ಸ್ಪಂದಿಸಿಲ್ಲ. ಈ ವರ್ಷವಾದರೂ ಹಿಂದೂ ಅರ್ಚಕರನ್ನು ಸರಕಾರ ನೇಮಿಸಬೇಕೆಂದು ಸುನೀಲ್ ಸರಕಾರವನ್ನು ಒತ್ತಾಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...