ಖಾದಿಗೆ ಇನ್ನಷ್ಟು ಪ್ರಚಾರ: ಊರ ಸಂತೆ, ಜಾತ್ರೆಗಳಲ್ಲಿಯೂ ಮೇಳ
ಹುಬ್ಬಳ್ಳಿ : ಖಾದಿ ಉಡುಪುಗಳಿಗೆ ಹೆಚ್ಚಿನ ಚಾಲನೆ ನೀಡುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಹಾಗೂ ಸಂತೆಯ ದಿನಗಳಲ್ಲಿ ಖಾದಿ ಉತ್ಸವ ಆಚರಿಸಲಾಗುವುದು ಎಂದು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಬಿ. ಎಸ್. ಪಾಟೀಲ ತಿಳಿಸಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆ, ಗರಗದ ಮಡಿವಾಳೇಶ್ವರ ಜಾತ್ರೆ, ಉಳವಿ, ಗೊಡಚಿ ಜಾತ್ರೆಗಳಲ್ಲಿ ಹಾಗೂ ದೀಪಾವಳಿ ಮತ್ತು ಗಣೇಶನ ಹಬ್ಬ ಮುಂತಾದ ಪ್ರಮುಖ ಹಬ್ಬದ ದಿನಗಳಲ್ಲಿ ಖಾದಿ ಉತ್ಸವವನ್ನು ಏರ್ಪಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ ಹೇಳಿದರು.
ರಾಜ್ಯದಲ್ಲಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಖಾದಿ ದಾಸ್ತಾನು ಇದೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲಿಯೇ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಉಡುಪು ದಾಸ್ತಾನು ಇದೆ. ಇವುಗಳ ವಿಲೇವಾರಿಗೆ ಅಕ್ಟೋಬರ್ 2ರಿಂದ 45 ದಿನಗಳ ಕಾಲ ಮತ್ತು ಜನವರಿ 10ರಿಂದ 45 ದಿನಗಳ ಕಾಲ ಶೇ 35 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಾಟೀಲ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...