ಕಾವೇರಿ ವಿವಾದ : ಬುಧವಾರ ಕೃಷ್ಣ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ
ಬೆಂಗಳೂರು : ತಮಿಳುನಾಡಿನೊಂದಿಗೆ ಉದ್ಭವಿಸಿರುವ ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆಯ ಕುರಿತು ಚರ್ಚಿಲು ಜುಲೈ 17ರಂದು ಸರ್ವ ಪಕ್ಷ ಸಭೆಯನ್ನು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕರೆದಿದ್ದಾರೆ.ವಿಧಾನ ಸಭೆಯಲ್ಲಿ ಈ ವಿಷಯವನ್ನು ಮಂಗಳವಾರ ಪ್ರಕಟಿಸಿದ ಕೃಷ್ಣ ವಿರೋಧ ಪಕ್ಷದ ನಾಯಕರನ್ನು ಕಾವೇರಿ ಸಮಸ್ಯೆ ಕುರಿತ ಚರ್ಚಾ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ ಆಹ್ವಾನಿಸಲಾಗುವುದು ಎಂದರು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ರಾಜ್ಯ ಸರಕಾರ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದಾಗಿ ಮಾಡಿರುವ ಆಪಾದನೆಯನ್ನು ಕೃಷ್ಣ ತಳ್ಳಿ ಹಾಕಿದರು.
ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಕಬಿನಿಯಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದಾಗಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಯುನ ಪಿ. ಜಿ. ಆರ್. ಸಿಂಧ್ಯಾ ಸರಕಾರವನ್ನು ದೂರಿದರು. ಅಲ್ಲದೆ ಈ ವಿಷಯವನ್ನು ಸರಕಾರ ಮುಚ್ಚಿಟ್ಟಿರುವುದರ ಹಿಂದಿರುವ ಕಾರಣವನ್ನು ಬಹಿರಂಗಪಡಿಸಬೇಕು ಎಂದೂ ಅವರು ಒತ್ತಾಯಿಸಿದರು.
‘ಕಳೆದ ವಾರವಷ್ಟೇ ಕಬಿನಿಯಿಂದ ನೀರು ಹರಿದುಹೋಗುತ್ತಿರುವುದಾಗಿ ಹೇಳಿದ್ದೆ. ಆದರೆ ಸರಕಾರ ನನ್ನ ಆಪಾದನೆಯನ್ನು ನಿರಾಕರಿಸಿತ್ತು. ಇವತ್ತು ಮತ್ತೆ ಮಾಧ್ಯಮಗಳು ಈ ವಿಷಯವನ್ನು ಪ್ರಕಟಿಸಿವೆ. ಕಬಿನಿ ಜಲಾಶಯ ಪ್ರದೇಶದಲ್ಲಿರುವ ರೈತರು ತಮಿಳುನಾಡಿಗೆ ನೀರು ಹರಿದುಹೋಗುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ ಸರಕಾರ ತಮಿಳುನಾಡಿಗೆ ಸಹಕರಿಸಲು ನಿರ್ಧರಿಸಿದೆ’ ಎಂದು ಪಿ.ಜಿ. ಆರ್ ಸಿಂಧ್ಯಾ ವಿರುದ್ಧ ಕಿಡಿ ಕಾರಿದರು.
ಕಾವೇರಿ ನದೀ ಪ್ರದೇಶದಲ್ಲಿ ಇನ್ನೆರಡು ವಾರಗಳಲ್ಲಿ ಮಳೆ ಮತ್ತೆ ಕೈ ಕೊಟ್ಟರೆ, ರೈತರು ಬರದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದ ಸಿಂಧ್ಯಾ ಕಬಿನಿಯ ಎರಡನೇ ಹಂತದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಂದುವರೆಸುವಂತೆ ಸರಕಾರವನ್ನು ಆಗ್ರಹಿಸಿದರು.
(ಪಿಟಿಐ)
ಮುಖಪುಟ / ಕೃಷ್ಣ ಗಾರುಡಿ