ಗ್ರಾಮೀಣ ಕೃಪಾಂಕ:ಕೋರ್ಟ್ಗೆ ಸೊಪ್ಪು ಹಾಕದ ಸರಕಾರಕ್ಕೆ ನೋಟಿಸ್
ಬೆಂಗಳೂರು: ಗ್ರಾಮೀಣ ಕೃಪಾಂಕ ಆಧಾರಿತ ನೇಮಕವನ್ನು ರದ್ದುಪಡಿಸಿ ನ್ಯಾಯಾಲಯ ನೀಡಿರುವ ತೀರ್ಪು ಜಾರಿಗೊಳಿಸದ ಕ್ರಮವನ್ನು ಪ್ರಶ್ನಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಮೇರೆಗೆ, ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಗ್ರಾಮೀಣ ಕೃಪಾಂಕ ಆಧಾರಿತ ನೇಮಕವನ್ನು 2001ರ ಅಕ್ಟೋಬರ್ 10ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಈ ಆದೇಶವನ್ನು ಇದುವರೆಗೂ ಅನುಷ್ಠಾನಗೊಳಿಸದ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಅರ್ಜಿದಾರರು ಮನವಿಮಾಡಿದ್ದಾರೆ.
ಕುಮಾರಸ್ವಾಮಿ ಹಾಗೂ ಮಂಜುನಾಥ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಿ. ಪಟ್ಟನಾಯಕ್ ಹಾಗೂ ರುಮಾಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯದ ಮುಖ್ಯಕಾರ್ಯದರ್ಶಿ ಮತ್ತು ಕೆಪಿಎಸ್ಸಿ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.
ಗ್ರಾಮೀಣ ಕೃಪಾಂಕ ನೀಡಿರುವುದು ಸಂವಿಧಾನ ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೃಪಾಂಕ ಆಧಾರದ ಮೇಲೆ ನೇಮಕಗೊಂಡಿರುವವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ತಮ್ಮನ್ನು ಅವರ ಜಾಗದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.
ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಸರಕಾರ ಪೇಚಿಗೆ ಸಿಲುಕಿದ್ದು, ಸುಪ್ರೀಂ ಕೋರ್ಟ್ ಆದೇಶದಿಂದ ಗ್ರಾಮೀಣ ಕೃಪಾಂಕ ಆಧಾರದ ಮೇಲೆ ನೇಮಕಗೊಂಡಿರುವ 13 ಸಾವಿರ ಅಭ್ಯರ್ಥಿಗಳಿಗೆ ಅನ್ವಯವಾಗುವುದರಿಂದ ಸರಕಾರದ ನಿರ್ಧಾರ ತೀರಾ ಮುಖ್ಯವೆನಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...