ಜು.18ರಿಂದ ಬೆಂಗಳೂರಲ್ಲಿ ಪಿ.ಸಿ.ಸರ್ಕಾರ್ : ವಿಧಾನಸೌಧ ಮಾಯ?
ಬೆಂಗಳೂರು : ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕ, ಆಗ್ರಾದ ತಾಜಮಹಲನ್ನೇ ಮಾಯಾ ಮಾಡಿರುವ ಖ್ಯಾತಿಯ ಪಿ.ಸಿ.ಸರ್ಕಾರ್ ಜೂನಿಯರ್ ಉರುಫ್ ಪ್ರದೀಪ್ ಚಂದ್ರ ಸರ್ಕಾರ್ ಜುಲೈ 18ರಿಂದ ಒಂದು ತಿಂಗಳು ಬೆಂಗಳೂರಲ್ಲಿ ಠಿಕಾಣಿ.
ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಮನ ತಣಿಯೆ ಇಂದ್ರಜಾಲ. ಹಾವಾಡಿಗರು, ಮೋಡಿಗಾರರು, ಸಾಧು ಸಂತರು, ಬೂದಿ ಭೂತರಾದಿಯಾಗಿ ಆಧುನಿಕ ಇಂದ್ರಜಾಲಿಗರ ತಂತ್ರಗಳನ್ನು ಜಾಲಾಡಿರುವ ಸರ್ಕಾರ್ ಬತ್ತಳಿಕೆಯಲ್ಲಿನ ಮಾಯಾ ಬಾಣಗಳು ತರಾವರಿ. ಪದ್ಮಶ್ರೀ ಪ್ರಶಸ್ತಿ ವಿಜೇತ ಅಪ್ಪ ಪಿ.ಸಿ.ಸರ್ಕಾರ್ ಸೀನಿಯರ್ ಗರಡಿಯಲ್ಲಿ ಪಳಗಿರುವ ಈ ಜೂನಿಯರ್ ಅಪ್ಪನಿಗೆ ತಕ್ಕ ಮಗ. 1971ರಲ್ಲಿ ಅಪ್ಪ ಸತ್ತ ನಂತರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇಂದ್ರಜಾಲವನ್ನು ಪಸರಿಸಿದ್ದು ಜೂನಿಯರ್.
ಮುದ್ದಾದ ಹೆಂಡತಿ ಜಯಶ್ರೀ, ಮಕ್ಕಳು ಮನೇಕಾ- ಮೌಬಾನಿ- ಮುಮ್ತಾಜ್ ಕೂಡ ಸರ್ಕಾರ್ ಮಾಯಾ ಮೋಡಿಯ ಸಾಥಿಗಳು. ಜಪಾನಿನಲ್ಲಿ ವಿಮಾನ, ತಾಜಮಹಲ್, ವಿಕ್ಟೋರಿಯಾ ಸ್ಮಾರಕಗಳನ್ನು ನಿಮಿಷಗಳ ಕಾಲ ಮಾಯ ಮಾಡಿ ಸಹಸ್ರಾರು ಜನ ಹುಬ್ಬೇರಿಸುವಂತೆ ಮಾಡಿರುವ ಅಗ್ಗಳಿಕೆ ಸರ್ಕಾರ್ ಅವರದ್ದು. ಸದಾ ಹೊಸತನ್ನು ಹೊಸೆಯುವ ಸರ್ಕಾರ್ ಜೂನಿಯರ್, ತಮ್ಮ ಅನೇಕ ತಂತ್ರಗಳ ಹಕ್ಕು ಕಾಯ್ದಿರಿಸಿದ್ದಾರೆ.
ಬೆಂಗಳೂರಲ್ಲೂ ಏನೇನನ್ನೋ ಮಾಯಾ ಮಾಡುವ ತಂತ್ರಗಳನ್ನು ಸರ್ಕಾರ್ ಹೊಸೆದಿದ್ದಾರಂತೆ. ವಿಧಾನಸೌಧವೇ ಮಾಯವಾದೀತೆ?
ಟಿಕೇಟು ದರಗಳ ಬಗ್ಗೆ ತಿಳಿಯಲು 5492769 ನಂಬರಿಗೆ ಫೋನಾಯಿಸಿ. ರಿತೇಶ್ ಅಥವಾ ಸ್ಯಾಮ್ ನಿಮಗೆ ಸಹಾಯ ಮಾಡುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...